ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಮಹಾ ಶಿವರಾತ್ರಿ ಮತ್ತು ಶ್ರೀ ಮಲಹಾನಿಕರೇಶ್ವರಸ್ವಾಮಿ ರಥೋತ್ಸವ ಪ್ರಯುಕ್ತ ಮಾ.4ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಮಾ.4ರ ಸಂಜೆ ಈಶ್ವರಗಿರಿಯಲ್ಲಿ ಸ್ತಂಭ ಗಣಪತಿಗೆ ವಿಶೇಷ ಪೂಜೆ, ಪ್ರಾರ್ಥನೆ, ಅಂಕುರಾರೋಪಣ ಜರುಗಲಿದೆ. 5ರಂದು ಬೆಳಗ್ಗೆ 10ಕ್ಕೆ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಧ್ವಜಾರೋಹಣ, ವೇದಪಾರಾಯಣ, ಶಿವಪುರಾಣ-ದೇವೀಭಾಗವತ-ಗಣೇಶಪುರಾಣ ಪಾರಾಯಣ ಮತ್ತು ಮಂತ್ರಜಪಗಳು ಪ್ರಾರಂಭಗೊಳ್ಳಲಿದೆ. 6ರಂದು ಬೆಳಿಗ್ಗೆ ರಥೋತ್ಸವಾಂಗ ಹೋಮ, ಜಪ, ಪಾರಾಯಣ, ಸಂಜೆ 6ಕ್ಕೆ ಶ್ರೀ ಭವಾನೀ ಮಲಹಾನಿಕರೇಸ್ವರ ಸ್ವಾಮಿಯ ರಾಜಬೀದಿ ಉತ್ಸವ, ಬಳಿಕ ಶ್ರೀಮಠದ ಪ್ರವಚನ ಮಂದಿರದಲ್ಲಿ ಸ್ವಾಮಿಗೆ ಡೋಲೋತ್ಸವ ನಡೆಯಲಿದೆ.
ಮಾ.7ರಂದು ಬೆಳಗ್ಗೆ 7ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಶ್ರೀಮಠದ ಶ್ರೀನರಸಿಂಹ ಭಾರತೀ ಯಾಗ ಮಂಟಪದಲ್ಲಿ ಮಹಾರುದ್ರಪುರಶ್ಚರಣೆ ಪ್ರಾರಂಭಗೊಳ್ಳಲಿದೆ. 10 ಗಂಟೆಗೆ ಶ್ರೀ ವಿದ್ಯಾಶಂಕರ ಸ್ವಾಮಿ ಉತ್ಸವದಲ್ಲಿ ಈಶ್ವರಗಿರಿಗೆ ಚಿತ್ತೈಸಲಿದ್ದು, ಸಂಜೆ 6ಗಂಟೆಗೆ ರಾಜಬೀದಿಯಲ್ಲಿ ಉತ್ಸವ, ಪ್ರವಚನ ಮಂದಿರದಲ್ಲಿ ಡೋಲೋತ್ಸವ ನಡೆಯಲಿದೆ. 8ರಂದು ಬೆಳಗ್ಗೆ 7ರಿಂದ ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾರುದ್ರ ಪುರಶ್ಚರಣೆ, 11.30ಕ್ಕೆ ಜಗದ್ಗುರುಗಳಿಂದ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷಪೂಜೆ, ಸಂಜೆ 5ಕ್ಕೆ ಪ್ರದೋಷ ಪೂಜೆ, ರಾತ್ರಿ 7.30ರಿಂದ ಶ್ರೀ ಸ್ವಾಮಿಗೆ ನಾಲ್ಕುಯಾಮ ಪೂಜೆ, ಗುರು ನಿವಾಸದಲ್ಲಿ ಉಭಯ ಶ್ರೀಗಳಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ನಾಲ್ಕು ಯಾಮ ವಿಶೇಷ ಪೂಜೆ ಜರುಗಲಿದೆ.
ಮಾ.9ರಂದು ಬೆಳಗ್ಗೆ ಜಪ, ಪಾರಾಯಣಾದಿಗಳು, ಮಹಾರುದ್ರ ಪುರಶ್ಚರಣೆ, ಸಂಜೆ 6ರಿಂದ ರಾಜಬೀದಿ ಉತ್ಸವ ಹಾಗೂ ಡೋಲೋತ್ಸವ ನಡೆಯಲಿದೆ. 10ರಂದು ಬೆಳಗ್ಗೆ 8ಕ್ಕೆ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಚನೆ, 10ಕ್ಕೆ ಯತಿವರ್ಯರ ಸಾನಿಧ್ಯದಲ್ಲಿ ಮಹಾನೀರಾಜನ, ಪ್ರಾರ್ಥನೆ, 10.30ಕ್ಕೆ ಚಂದ್ರಹೋರೆಯಲ್ಲಿ ರಥಾರೋಹಣ, ರಥೋತ್ಸವ, ಸಂಜೆ 6ಕ್ಕೆ ಮಹಾರಥೋತ್ಸವ ನೆರವೇರಲಿದೆ. 11ರಂದು ಓಕಳಿ ಉತ್ಸವ, ತುಂಗಾನದಿಯಲ್ಲಿ ಅವಭೃಥ ಸ್ನಾನ, ಮಹಾ ರುದ್ರಯಾಗದ ಪೂರ್ಣಾಹುತಿ, ಸಂಜೆ 6.30ರಿಂದ ಶಾರದಾಂಬಾ ದೇವಾಲಯದಲ್ಲಿ ಸಂಧಾನೋತ್ಸವ, ರಾತ್ರಿ 8ಕ್ಕೆ ತುಂಗಾನದಿಯಲ್ಲಿ ತೆಪ್ಪೋತ್ಸವ, ಧ್ವಜಾವರೋಹಣ,ಪ್ರಸಾದ ವಿನಿಯೋಗ ನಡೆಯಲಿದೆ.