ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿರುವ ಶ್ರೀ ಕೆಂಚಾಂಬ ದೇವಿಯ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವಿಯಾಗಿ ಕಲಶಾರಾಧನೆ, ಗಣಹೋಮ, ನವಗ್ರಹಹೋಮ ಪೂಜಾ ಕೈಂಕರ್ಯಗಳು ನಡೆದವು.
ದೇವಸ್ಥಾನ ಪ್ರಧಾನ ಅರ್ಚಕ ರಾಮಸ್ವಾಮಿ ಮಾತನಾಡಿ, ಶುಕ್ರವಾರ ಬೆಳಗ್ಗೆ 7.30ಕ್ಕೆ ಮಂಗಳವಾದ್ಯಗೋಷ್ಠಿಯೊಂದಿಗೆ ಸುಮಂಗಲಿಯರಿಂದ ಪೂರ್ಣಕುಂಭಗಳ ಮೆರವಣಿಗೆ, ದೇವಿಯ ಉತ್ಸವ, ಚಂಡಿಕಾಹೋಮ, ಮಧ್ಯಾಹ್ನ 12ಕ್ಕೆ ಕುಂಭಾಭಿಷೇಕ, ಪೂರ್ಣಾಹುತಿ, ದೇವಿಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಅನ್ನದಾಸೋಹ ಇರಲಿದೆ ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥಮೂರ್ತಿ ದಂಪತಿ, ಪುರೋಹಿತ ಸತ್ಯನಾರಾಯಣ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲ್ (ರಘು) ದಂಪತಿ ಹಾಗೂ ಎಲ್ಲ ಸಮಿತಿಗಳ ಸದಸ್ಯರು ಹಾಜರಿದ್ದರು.