ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಮೂಲತಾಣ ಅಶೋಕೆಯಲ್ಲಿ ನಡೆಯುತ್ತಿರುವ ಅತಿರುದ್ರ ಸೇವಾ ಮಹೋತ್ಸವದ ಕೊನೆಯ ದಿನ ಜ. 9ರಂದು ಶ್ರೀ ಗುರುಪರಂಪರೆಯ ವಿಶೇಷ ಸೇವೆ ‘ಖ್ಯಾಪನಾ’ಕಾರ್ಯಕ್ರಮ ನಡೆಯಲಿದೆ.
ಹಿಂದಿನ ಯಾವುದೋ ಕಾಲಘಟ್ಟದಲ್ಲಿ ಆಗಿರಬಹುದಾದ ತಪ್ಪು ಮತ್ತು ಪ್ರಮಾದಗಳ ಪರಿಮಾರ್ಜನೆಗಾಗಿ ಶ್ರೀಮಠದ ಪೂರ್ವಾಚಾರ್ಯರುಗಳಲ್ಲಿ ಕ್ಷಮಾಯಾಚಿಸುವ ಅಪರೂಪದ ಈ ಪ್ರಾರ್ಥನಾ ಸಮಾರಂಭದಲ್ಲಿ ಸಮಸ್ತ ಹವ್ಯಕ ಸಮಾಜದ 15 ಸಾವಿರಕ್ಕೂ ಅಧಿಕ ಶಿಷ್ಯ-ಭಕ್ತರು ಭಾಗವಹಿಸಲಿದ್ದಾರೆ. ಅಶೋಕೆಯ ಮೂಲ ಮಠ ಆವರಣದಲ್ಲಿ ಸಮಾವೇಶಗೊಳ್ಳಲಿರುವ ಖ್ಯಾಪನಾ ಪ್ರಾರ್ಥನೆಯಲ್ಲಿ ಸಾಮೂಹಿಕ ಗುರುಅಷ್ಟಕ ಪಠಣ ನಡೆಯಲಿದೆ. ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಶಿಷ್ಯಕೋಟಿಯನ್ನು ಉದ್ದೇಶಿಸಿ ಆಶೀರ್ವಚನ ದಯಪಾಲಿಸಲಿದ್ದಾರೆ. ಈ ಸಂಬಂಧ ಮೂಲ ಮಠ ಪರಿಸರದಲ್ಲಿ ಬೃಹತ್ ವೇದಿಕೆ ಮತ್ತು ಊಟೋಪಚಾರದ ಸಿದ್ಧತೆಗಳನ್ನು ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಶಿಷ್ಯ-ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.