ಅಮರಾವತಿ: ಮುಖ್ಯಮಂತ್ರಿಯನ್ನು ಉಪಮುಖ್ಯಮಂತ್ರಿ ಹೀಗೆಲ್ಲ ಹೊಗಳಬಹುದಾ? ಟಿಕ್ಟಾಕ್ ವಿಡಿಯೋ ಮಾಡಿ…!
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪಿ.ಪುಷ್ಮಾ ಶ್ರೀವಾಣಿ ವಿಭಿನ್ನವಾಗಿ ತಮ್ಮ ರಾಜ್ಯದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ಅವರನ್ನು ಹೊಗಳಿದ್ದಾರೆ.
ಪುಷ್ಪಾ ಶ್ರೀವಾಣಿಯವರು ತೆಲುಗಿನ ‘ರಾಯಲ್ಸೀಮಾ ಮುದ್ದುಬಿಡ್ಡಾ ಮನಾ ಜಗನ್ ಅನ್ನಾ’ ಹಾಡಿಗೆ ಟಿಕ್ಟಾಕ್ ಸೆಲ್ಫೀ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ಈಗ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಕಳೆದ ಮೇ ನಲ್ಲಿ ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಗನ್ ರೆಡ್ಡಿಯವರು ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಆಗ ತಮ್ಮ ಗೆಲುವಿನ ಸಂಭ್ರಮಕ್ಕಾಗಿ ವೈಎಸ್ಆರ್ ಪಕ್ಷ ಈ ಹಾಡನ್ನು ರಚಿಸಿತ್ತು. ಜಗನ್ ಅವರನ್ನು ರಾಯಲ್ಸೀಮಾದ ಪುತ್ರ ಎಂದೇ ಈಗಲೂ ಕರೆಯಲಾಗುತ್ತಿದೆ.
ರಾಯಲ್ಸೀಮಾದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಜಗನ್ ರೆಡ್ಡಿಯವರನ್ನು ಉಪಮುಖ್ಯಮಂತ್ರಿ ಶ್ರೀವಾಣಿ ಇದೇ ಹಾಡನ್ನು ಬಳಸಿ ಟಿಕ್ಟಾಕ್ ವಿಡಿಯೋ ಮೂಲಕ ಹೊಗಳಿದ್ದು ಸ್ವಲ್ಪ ವಿಚಿತ್ರವಾದರೂ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀವಾಣಿ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವರೂ ಹೌದು.
ಆಂಧ್ರಕ್ಕೆ ಮೂರು ರಾಜಾಧಾನಿ ಸ್ಥಾಪಿಸಲು ಜಗನ್ ರೆಡ್ಡಿ ಸರ್ಕಾರ ಮುಂದಾಗಿದೆ. ಇದು ಈಗಿನ ರಾಜಧಾನಿ ಅಮರಾವತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಗನ್ ಅವರು ಆಂಧ್ರ ಉತ್ತರ ಕರಾವಳಿಯಲ್ಲಿರುವ ವಿಶಾಖಪಟ್ಟಣಂನ್ನು ಆಡಳಿತಾತ್ಮಕ ರಾಜಧಾನಿ ಹಾಗೂ ರಾಯಲ್ ಸೀಮಾದ ಕರ್ನೂಲ್ನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ರಚಿಸಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್)