ಬೆಂಗಳೂರು: ಭಾರತೀಯ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ನಡುವೆ ವಿವಿಧ ಹಾಲಿ-ಮಾಜಿ ಕ್ರಿಕೆಟಿಗರು ತಮ್ಮ ಕನಸಿನ ತಂಡಗಳನ್ನು ಆಯ್ಕೆ ಮಾಡುತ್ತ ಸಮಯ ಕಳೆಯುತ್ತಿದ್ದಾರೆ. ಈ ಸಾಲಿಗೆ ಈಗ ಎಸ್. ಶ್ರೀಶಾಂತ್ ಕೂಡ ಸೇರ್ಪಡೆಗೊಂಡಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷಗಳ ನಿಷೇಧ ಶಿಕ್ಷೆಯನ್ನು ಸೆಪ್ಟೆಂಬರ್ನಲ್ಲಿ ಮುಗಿಸಿ ಮುಂದಿನ ದೇಶೀಯ ಕ್ರಿಕೆಟ್ ಋತುವಿನ ಮೂಲಕ ಮರಳುವ ಹಂಬಲದಲ್ಲಿರುವ ಕೇರಳದ ವೇಗಿ ಶ್ರೀಶಾಂತ್, ತಮ್ಮ ಆಯ್ಕೆಯ ಭಾರತದ ಸಾರ್ವಕಾಲಿಕ ಟಿ20 ತಂಡವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಅವರು ಹಾಲಿ ನಾಯಕ ವಿರಾಟ್ ಕೊಹ್ಲಿ ಅಥವಾ ಟಿ20 ವಿಶ್ವಕಪ್ ವಿಜೇತ ಮಾಜಿ ನಾಯಕ ಎಂಎಸ್ ಧೋನಿ ಅವರನ್ನಾಗಲಿ ನಾಯಕರನ್ನಾಗಿ ಹೆಸರಿಲ್ಲ ಎಂಬುದು ಅಚ್ಚರಿಯ ಅಂಶವಾಗಿದೆ.
ಸಂದರ್ಶನವೊಂದರ ವೇಳೆ ಭಾರತದ ಟಿ20 ತಂಡವನ್ನು ಹೆಸರಿಸಿರುವ 37 ವರ್ಷದ ಶ್ರೀಶಾಂತ್, ಮುಂಬೈ ಬ್ಯಾಟ್ಸ್ಮನ್ ರೋಹಿತ್ ಶರ್ಮ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕೊಹ್ಲಿ ಬಗ್ಗೆ ಅಪಾರವಾದ ಗೌರವವಿದ್ದರೂ, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ ಉತ್ತಮ ಯಶಸ್ಸು ಕಂಡಿರುವ ರೋಹಿತ್ ಶರ್ಮ ಅವರೇ ಟಿ20 ತಂಡಕ್ಕೆ ನಾಯಕರಾಗುವುದು ಸೂಕ್ತ ಎಂದಿದ್ದಾರೆ. ತಂಡದ ಆರಂಭಿಕರನ್ನಾಗಿ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದ್ದರೆ, ವಿರಾಟ್ ಕೊಹ್ಲಿಗೆ ವನ್ಡೌನ್ ಬ್ಯಾಟ್ಸ್ಮನ್ ಸ್ಥಾನ ನೀಡಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ ರದ್ದು, ಗಂಗೂಲಿ ಘೋಷಣೆ
ಎಡಗೈ ಆಟಗಾರ ಸುರೇಶ್ ರೈನಾ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀಶಾಂತ್, ಕನ್ನಡಿಗ ಕೆಎಲ್ ರಾಹುಲ್ಗೂ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಎಂಎಸ್ ಧೋನಿ ತಂಡದ ವಿಕೆಟ್ ಕೀಪರ್ ಆಗಿದ್ದಾರೆ. ತಮಗೂ ತಂಡದಲ್ಲಿ ಸ್ಥಾನ ನೀಡಿರುವ ಅವರು ಮತ್ತೋರ್ವ ವೇಗದ ಬೌಲರ್ ಆಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆರಿಸಿದ್ದಾರೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ತಂಡದಲ್ಲಿರುವ ಏಕೈಕ ತಜ್ಱ ಸ್ಪಿನ್ ಬೌಲರ್ ಆಗಿದ್ದಾರೆ.
ಶ್ರೀಶಾಂತ್ ಆಯ್ಕೆ ಮಾಡಿದ ಭಾರತದ ಟಿ20 ತಂಡ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಕೆಎಲ್ ರಾಹುಲ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಎಸ್. ಶ್ರೀಶಾಂತ್.
PHOTOS| ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಪುತ್ರಿಯ ಮೊದಲ ಚಿತ್ರ, ಹೆಸರು ಪ್ರಕಟ