ಶಿವಮೊಗ್ಗ: ಪ್ರತಿಯೊಬ್ಬರಲ್ಲೂ ಕ್ರೀಡಾಸ್ಫೂರ್ತಿ ಇರಬೇಕು. ಸೌಹಾರ್ದತೆ, ಶಾಂತಿ ಮತ್ತು ಪರಸ್ಪರ ಪ್ರೀತಿ ಇರಬೇಕು ಎಂದು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಹೇಳಿದರು.
ರಾಗಿಗುಡ್ಡದಲ್ಲಿ ಬುಧವಾರ ಶಿವಮೊಗ್ಗ ಜಿಲ್ಲಾ ಪೊಲೀಸ್ಯಿಂದ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿ ರಿಪಬ್ಲಿಕ್ ಡೇ ಕಪ್-2024 ಉದ್ಘಾಟಿಸಿ ಮಾತನಾಡಿದ ಅವರು, ರಾಗಿಗುಡ್ಡದ ನಿವಾಸಿಗಳಿಗಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಹಿಂದೆ ನಡೆದ ಅಹಿತಕರ ಘಟನೆಗಳನ್ನು ಮರೆಸುವ ಶಕ್ತಿ ಕ್ರೀಡಾಕೂಟಗಳಿದ್ದು ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ನೆರವಾಗಲಿದೆ ಎಂದರು.
150 ಕ್ರೀಡಾಸಕ್ತರು ನೋಂದಣಿ ಮಾಡಿಕೊಂಡಿದ್ದು ಎರಡು ದಿನ ಕ್ರೀಡಾಕೂಟ ಆಯೋಜಿಸಲಾಗಿದೆ. ಗುರುವಾರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಹುಮಾನ ವಿತರಿಸುವರು. ಇದೇ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದಲೇ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ತಲಾ ನಾಲ್ವರು ಹಿಂದು ಮತ್ತು ಮುಸ್ಲಿಮರು, ಇಬ್ಬರು ಪೊಲೀಸರು, ತಲಾ ಒಬ್ಬ ಕ್ರಿಶ್ಚಿಯನ್ ಮತ್ತು ಪತ್ರಕರ್ತ ಒಳಗೊಂಡ 11 ಮಂದಿಯ ತಂಡ ರಚಿಸಿದ್ದು, 9 ತಂಡಗಳು ಭಾಗವಹಿಸಿದ್ದವು. ಪ್ರತಿ ತಂಡಕ್ಕೆ 5 ಓವರ್ ನಿಗದಿಪಡಿಸಲಾಗಿತ್ತು. ಚಾಂಪಿಯನ್ ಆದ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಈ ಭಾಗದಲ್ಲಿ ಕೆಲ ತಿಂಗಳ ಹಿಂದೆ ಕಹಿ ಘಟನೆ ನಡೆದಿತ್ತು. ಸಾಮಾರಸ್ಯದ ಬದುಕಿಗಾಗಿ ಎಲ್ಲ ಧರ್ಮಿಯರು ಒಟ್ಟಾಗಿರುವ ಶಾಂತಿನಗರ ಮತ್ತು ರಾಗಿಗುಡ್ಡದ ಜನಸಾಮಾನ್ಯರಲ್ಲಿ ಸಹೋದರತೆಯ ಮನೋಭಾವನೆ ಬೆಳೆಯುವಂತಾಗಲಿ ಮತ್ತು ಎಲ್ಲರು ಸೌಹಾರ್ದಯುತವಾಗಿ ಬಾಳಬೇಕು ಎನ್ನುವ ಸದುದ್ದೇಶದಿಂದ ನೂತನ ಪ್ರಯೋಗ ಮಾಡಿದ್ದು, ಸಾರ್ವಜನಕರಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಎಎಸ್ಪಿಗಳಾದ ಅನಿಲ್ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್ಪಿ ಸುರೇಶ್, ಇನ್ಸ್ಪೆಕ್ಟರ್ ರವಿ ಪಾಟೀಲ್, ಕುಮಾರ್, ಸಿ.ಆರ್.ಕೊಪ್ಪನ್, ಟಿ.ಹರ್ಷ ಮತ್ತಿತರರಿದ್ದರು.