ಬೆಳಗಾವಿ: ಶ್ರೀರಾಮಚಂದ್ರನ ಪಾದಸ್ಪರ್ಶವಾಗಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿರುವ ಶಬರಿಕೊಳ್ಳದಲ್ಲಿ ಬುಧವಾರ ವಿಶೇಷ ಪೂಜೆ, ಹೋಮ- ಹವನ ನೆರವೇರಿಸಲಾಯಿತು. ಶ್ರೀರಾಮನ ಬರುವಿಕೆಯನ್ನೇ ಕಾದಿದ್ದ ಭಕ್ತೆ ಶಬರಿದೇವಿ ನೆಲೆಸಿದ್ದ ಪುಣ್ಯ ತಾಣ ಇದು ಎಂಬ ನಂಬಿಕೆಯಿದೆ.
ಎಷ್ಟೋ ವರ್ಷಗಳ ನಿರೀಕ್ಷೆಯಂತೆ ರಾಮ ಬಂದಾಗ, ಆತನಿಗೆ ಶಬರಿದೇವಿ ತಿನ್ನಲು ಬೋರೆ ಹಣ್ಣು ನೀಡಿದ ಪ್ರದೇಶವಿದು ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಶಬರಿಕೊಳ್ಳದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಪುಣ್ಯಕ್ಷೇತ್ರಕ್ಕೆ ತೆರಳಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಇತರರು ವಿಶೇಷ ಪೂಜೆ ಸಲ್ಲಿಸಿ, ನಮಿಸಿದರು.