ಮಡಿಕೇರಿ: ನಗರದ ಇಸ್ಕಾನ್ ಮಂದಿರದಲ್ಲಿ ಗುರುವಾರ ಸಂಜೆ ವಿಶೇಷ ಪೂಜೆ, ಭಜನೆಯೊಂದಿಗೆ ಶ್ರೀ ಜಗನ್ನಾಥ, ಸೌಭದ್ರ ಹಾಗೂ ಬಲರಾಮರ ಮೂರ್ತಿಗಳನ್ನು ಹೊತ್ತ ರಥಯಾತ್ರೆ ನಗರದ ಮುಖ್ಯಬೀದಿಗಳಲ್ಲಿ ಸಾಗಿತು.
ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರ ಎದುರಿನಿಂದ ಆರಂಭಗೊಂಡ ರಥಯಾತ್ರೆ ಚೌಕ್, ಗಣಪತಿ ಬೀದಿ, ಮಹದೇವಪೇಟೆ, ಅಂಚೆಕಚೇರಿ ಮುಂಭಾಗ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಗಾಂಧಿ ಮೈದಾನದಲ್ಲಿ ಸಂಗಮಗೊಂಡಿತು. ಇಸ್ಕಾನ್ ಬಳಗ ಹಾಗೂ ಸದ್ಭಕ್ತರಿಂದ ರಥ ಎಳೆಯುವುದರೊಂದಿಗೆ ಹಿಮ್ಮೇಳಕ್ಕೆ ತಕ್ಕಂತೆ ತಾಳ ಹಾಕುತ್ತಾ ಭಗವಂತನ ಸಂಕೀರ್ತನೆ ನಡೆಯಿತು. ಮಹಾಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಇಸ್ಕಾನ್ ಬಳಗದ ಮುಖ್ಯಸ್ಥ ತ್ರಿವಿಕ್ರಮದಾಸ್, ಪ್ರಮುಖರಾದ ಸುಧೀರ್ ಚೈತನ್ಯ ದಾಸ್, ಸಿದ್ದಗೋವಿಂದ ದಾಸ್, ಸುಪ್ರೀತಿ ಮಾಧವಿ, ಅನುರಾಧ ಪದ್ಮಾವತಿ, ಗೋಪಿಕಾ ಯಶೋದಾ, ಬಸವರಾಜ್, ಪುಟ್ಟರಾಜು ಇದ್ದರು.