ದೇವನಹಳ್ಳಿ: ಇದೀಗ ದೇಶದಲ್ಲೇ ಮೊದಲ ಬಾರಿಗೆ ಕೆಂಪೇಗೌಡ ಏರ್ಪೋಟ್ ನಲ್ಲಿ ವಿಶೇಷ ಚೇತನರಿಗಾಗಿ ಹೊಸ ಸೌಲಭ್ಯ ಆರಂಭಿಸಲಾಗಿದೆ. ಇನ್ನು ಮುಂದೆ ವಿಶೇಷಚೇತನರು ಸಾಮಾನ್ಯರ ನಡುವೆ ಕಷ್ಟಪಟ್ಟು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
ವಿಮಾನದಲ್ಲಿ ಪ್ರಯಾಣಿಸುವ ವಿಶೇಷಚೇತನ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಈ ಹೊಸ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಏರ್ಪೋಟ್ಗೆ ಬರುವ ಪ್ರತಿಯೊಬ್ಬ ವಿಶೇಷಚೇತನರಿಗೆ ಪ್ರತ್ಯೇಕ ಸಿಬ್ಬಂದಿ ಮತ್ತು ಸಾಲಿನ ವ್ಯವಸ್ಥೆ ಇರಲಿದೆ. ಇನ್ನು ಟ್ಯಾಗ್ ಮೂಲಕ ವಿಶೇಷ ಚೇತನರು ನೇರವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.
ನಿಲ್ದಾಣದಲ್ಲಿರುವ ಟರ್ಮಿನಲ್ನಿಂದ ವಿಮಾನ ಹತ್ತುವ ತನಕ ಬೇಕಾದ ಸಹಾಯವನ್ನು ವಿಶೇಷವಾಗಿ ನಿಯೋಜಿಸಿರುವ ಸಿಬ್ಬಂದಿ ಮಾಡಲಿದ್ದಾರೆ. ಈ ಸಿಬ್ಬಂದಿ ವಿಶೇಷಚೇತನರಿಗೆ ಯಾವುದೇ ರೀತಿ ಚಾರ್ಜ್ ಮಾಡದೇ ಉಚಿತವಾಗಿ ವೀಲ್ಚೇರ್ ಮೂಲಕ ಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಇದರ ಜೊತೆಗೆ ಬೋರ್ಡಿಂಗ್ ಪಾಸ್ ತೆಗೆದು ಕೊಡಲು ಮತ್ತು ಬೇಕಾದಲ್ಲಿಗೆ ಕರೆದುಕೊಂಡು ಹೋಗಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅದಲ್ಲದೇ ಈ ಸಿಬ್ಬಂದಿ ಕಿವುಡರಿಗೆ ಕೈಸನ್ನೆ ಭಾಷೆಯಲ್ಲೆ ಸಹಾಯ ಮಾಡಲೂ ತರಬೇತಿ ಪಡೆದಿದ್ದಾರೆ.
ಈ ವಿಶೇಷ ಸೌಲಭ್ಯವನ್ನು ಸನ್ ಫ್ಲವರ್ ಲ್ಯಾನಿಯಾರ್ಡ್ ಸಂಸ್ಥೆ ಮೂಲಕ ಜಾರಿಗೆ ತರಲಾಗಿದೆ. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಶಿಷ್ಟ ಮಾದರಿ ಯೋಜನೆಗೆ ಚಾಲನೆ ಸಿಕ್ಕಿದೆ.