ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರು ಎಲ್ಲರನ್ನೂ ಅಗಲಿ ಇಂದಿಗೆ ಒಂದು ವರ್ಷ. ಆದರೆ ವರ್ಷ ಕಳೆದರೂ ಬಹಳಷ್ಟು ಮಂದಿಗೆ ಅಪ್ಪು ಇಲ್ಲ ಎಂಬುದನ್ನು ಇನ್ನೂ ಅರಗಿಸಿಕೊಳ್ಳಲಿಕ್ಕೇ ಸಾಧ್ಯವಾಗಿಲ್ಲ. ಮಾತ್ರವಲ್ಲ, ಅಗಲಿಕೆ ಬಳಿಕ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದ್ದು, ಅದು ಕಿಂಚಿತ್ತೂ ತಗ್ಗದಿರುವುದು ಎಲ್ಲೆಡೆ ಗೋಚರಿಸುತ್ತಿದೆ.
ಪುನೀತ್ ಅಗಲಿದ ದಿನದಿಂದಲೂ ರಾಜ್ಯದ ಹಲವೆಡೆ ಪುನೀತ್ ಭಾವಚಿತ್ರಗಳು ಕಣ್ಣಿಗೆ ಕಾಣಿಸುತ್ತಿದ್ದು, ಅವರ ಹೆಸರಲ್ಲಿ, ಅವರ ನೆನಪಲ್ಲಿ ಹಲವೆಡೆ ಒಂದಲ್ಲ ಒಂದು ಕೆಲಸ ನಡೆಯುತ್ತಲೇ ಇದೆ. ಆ ಮೂಲಕ ಪುನೀತ್ ನಮನ ಮುಂದುವರಿಯುತ್ತಲೇ ಇದ್ದು, ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಕೂಡ ವಿಶಿಷ್ಟ ರೀತಿಯಲ್ಲಿ ಪುನೀತ್ ಅವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುತ್ತಿದೆ.
ಕೆಎಂಎಫ್ನಿಂದ ಉತ್ಪಾದನೆ ಆಗುತ್ತಿರುವ ಎಲ್ಲ ಹಾಲಿನ ಪ್ಯಾಕೇಟುಗಳ ಮೇಲೆ ‘ಗಂಧದಗುಡಿ: ಜರ್ನಿ ಆಫ್ ಎ ಟ್ರೂ ಹೀರೋ’ ಎಂಬುದನ್ನು ಮುದ್ರಿಸಲಾಗಿದೆ. ಹದಿನೈದು ದಿನಗಳ ಕಾಲ ಹಾಲಿನ ಪೊಟ್ಟಣದ ಮೇಲೆ ಈ ಸಾಲು ಕಂಡುಬರಲಿದೆ.
ಕೆಎಂಎಫ್ಗೆ ಪುನೀತ್ ಈ ಹಿಂದೆ ರಾಯಭಾರಿ ಆಗಿದ್ದರು. ಯಾವುದೇ ಸಂಭಾವನೆ ಪಡೆಯದೆ ಬ್ರ್ಯಾಂಡ್ ಅಂಬಾಸಡರ್ ಆಗಿದ್ದ ಅವರು ಆ ಮೂಲಕ ರೈತರಿಗೆ ಹಾಗೂ ರಾಜ್ಯದ ಸಂಸ್ಥೆಗೆ ನೆರವಾಗಿದ್ದರು. ಇದೀಗ ಕೆಎಂಎಫ್ ಅದಕ್ಕೆ ಧನ್ಯವಾದ ಸಲ್ಲಿಸುವ ರೀತಿಯಲ್ಲಿ ಈ ರೀತಿ ಪುನೀತ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದಷ್ಟೇ ಅಲ್ಲದೆ, ಅಪ್ಪು ಕುರಿತ ಸಾಲನ್ನು ಪೊಟ್ಟಣದ ಮೇಲೆ ಮುದ್ರಿಸಿ ಗೌರವವನ್ನೂ ಸಲ್ಲಿಸುತ್ತಿದೆ. ಕೆಎಂಎಫ್ನ ಈ ಕಾರ್ಯಕ್ಕೆ ಅಪ್ಪು ಅಭಿಮಾನಿಗಳಲ್ಲದೆ ಇತರರಿಂದಲೂ ಮೆಚ್ಚುವೆ ವ್ಯಕ್ತವಾಗುತ್ತಿದೆ.
‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?