ನಾಪೋಕ್ಲು: ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆಯನ್ನು ಸೋಮವಾರ ಸಲ್ಲಿಸಲಾಯಿತು.
ಮಳೆ ಬೆಳೆಗಳ ವರದಾತ ಭವರೋಗ ನಿವಾರಕ ಎಂದು ಪ್ರಸಿದ್ಧಿ ಪಡೆದ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗೆ 5.45 ರಿಂದ 6.45ರವರೆಗೆ ರುದ್ರಾಭಿಷೇಕ ಪೂಜೆ ಹಾಗೂ ವಿವಿಧ ವಿಶೇಷ ಪೂಜಾ ಸೇವೆಗಳನ್ನು ನಡೆಸಲಾಯಿತು.
ಭಕ್ತ ಜನ ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಸೇರಿ 101 ಎಳೆನೀರು ಅಭಿಷೇಕ, ಹಾಲು ಅಭಿಷೇಕ ನೆರವೇರಿಸಿದರು.
ಮಳೆಯಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಸಕಲ ಪ್ರಾಣಿ ಪಕ್ಷಿಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಸಕಾಲದಲ್ಲಿ ಮಳೆಯಾಗಿ ಸಮಸ್ಯೆಗಳು ನಿವಾರಣೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆಯನ್ನು ಅಖಿಲ ಕೊಡವ ಸಮಾಜ, ಭಕ್ತ ಜನ ಸಂಘದ ಅಧ್ಯಕ್ಷ ಹಾಗೂ ದೇವಾಲಯದ ತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಸಲ್ಲಿಸಿದರು. ಈ ಸಂದರ್ಭ ಭಕ್ತ ಜನ ಸಂಘದ ಹಾಲಿ ಹಾಗೂ ಮಾಜಿ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು. ದೇವಾಲಯದ ಮುಖ್ಯ ಅರ್ಚಕ ಕುಶ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.