ಮುಂಬೈ: ಸಮಾಜವಾದಿ ಪಕ್ಷದ ಶಾಸಕರೊಬ್ಬರು ವಂದೇ ಮಾತರಂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಗಿದೆ.
ಮನ್ಖುರ್ದ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಬು ಅಜ್ಮಿ ವಂದೇ ಮಾತರಂ ಕುರಿತು ಹೇಳಿಕೆ ನೀಡಿದರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಶಾಸಕ ಅಜ್ಮಿ ನಾವು ಅಲ್ಲಾನನ್ನು ನಂಬುವುದರಿಂದ ವಂದೇ ಮಾತರಂಗೆ ತಲೆಬಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ಸದನದಲ್ಲಿ ಪ್ರಸ್ತಾಪಿಸುವ ವೇಳೆ ವಂದೇ ಮಾತರಂ ಪಠಣಕ್ಕೆ ಅಸಮ್ಮತಿ ಸೂಚಿಸಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೆಲವರು ಭಾರತದಲ್ಲಿ ವಾಸಿಸಬೇಕಾದರೆ ವಂದೇ ಮಾತರಂ ಪಠಣೆ ಮಾಡಬೇಕು ಎಂದು ಹೇಳುತ್ತಾರೆ. ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ನಾವು ಅಲ್ಲಾನನ್ನು ನಂಬುವ ಕಾರಣ ವಂದೇ ಮಾತರಂಗೆ ತಲೆಬಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸ್ಪೋಟ ಸಂಚಿನ ಹಿಂದಿದೆ ಆ ಒಂದು ದ್ವೇಷ
INDIA ನಾಯಕರು ಸ್ಪಷ್ಟನೆ ನೀಡಬೇಕು
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಕೂಡಲೇ ಅಜ್ಮಿರವರಿಗೆ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಸದನವನ್ನು ಕೆಲಕಾಲ ಮುಂದೂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ವಿಪಕ್ಷಗಳ ಒಕ್ಕೂಟವಾದ INDIAದಲ್ಲಿ ಸಮಾಜವಾದಿ ಪಕ್ಷ ಕೂಡ ಒಂದು. ಈ ಕೂಡಲೇ ತಮ್ಮ ಪಕ್ಷದ ಶಾಸಕರು ನೀಡಿರುವ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಔರಂಗಜೇಬ್ ಮುಂದೆ ತಲೆಬಾಗಿಸುವವರು ವಂದೇ ಮಾತರಂ ವಿಚಾರ ಬಂದರೆ ಯಾಕೀಗೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
INDIA ಎಂದು ತಮ್ಮ ಮೃತ್ರಿಕೂಟಕ್ಕೆ ಹೆಸರಿಟ್ಟುಕೊಂಡಿರುವ ನಾಯಕರು ತಮ್ಮ ಹೇಳಿಕೆಗಳನ್ನು ನೀಡುವಾಗ ಮಾತ್ರ ದೇಶವಿರೋಧಿಯಾಗಿರುತ್ತದೆ. ಈ ಕುರಿತು INDIA ಮೃತ್ರಿಕೂಟದ ಎಲ್ಲಾ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆಗ್ರಹಿಸಿದ್ದಾರೆ.