ಮುಂಬೈ: ಆದಾಯ ತೆರಿಗೆ(ಐಟಿ) ಇಲಾಖೆಯ ಪರಿಶೀಲನೆಗೆ ಒಳಗಾಗಿ 20 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ನಟ ಸೋನು ಸೂದ್ ಮೌನ ಮುರಿದಿದ್ದಾರೆ. ಐಟಿ ಅಧಿಕಾರಿಗಳ ಸಮೀಕ್ಷೆ ಮತ್ತು ಹೇಳಿಕೆ ಬಗ್ಗೆ ಇದೀಗ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಕಠಿಣ ಮಾರ್ಗದಲ್ಲೂ ಪ್ರಯಾಣ ಸುಲಭವೆನಿಸುತ್ತಿದೆ, ಇದು ಪ್ರತಿ ಹಿಂದೂಸ್ತಾನಿಯ ಶುಭ ಹಾರೈಕೆಗಳ ಪ್ರಭಾವ ಎನಿಸುತ್ತದೆ’ ಎಂದು ಹಿಂದಿಯಲ್ಲಿ ಕಾವ್ಯಮಯವಾಗಿ ಟ್ವೀಟ್ ಮಾಡಿರುವ ಸೂದ್, ಸುದೀರ್ಘ ಸಂದೇಶವೊಂದರಲ್ಲಿ “ನೀವು ಪ್ರತಿ ಬಾರಿ ನಿಮ್ಮ ಕಡೆಯ ಕಥೆ ಹೇಳಬೇಕಿಲ್ಲ, ಸಮಯ ಹೇಳುತ್ತದೆ” ಎಂದು ತಾವು ಸದ್ಯಕ್ಕೆ ಐಟಿ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!
ಭಾರತದ ಜನರ ಸೇವೆಗಾಗಿ ತಮ್ಮನ್ನು ತಾವೇ ಮುಡಿಪಾಗಿಡಬೇಕೆಂದು ಪಣ ತೊಟ್ಟಿರುವುದಾಗಿ ಹೇಳಿರುವ ಸೂದ್, ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಶ್ರಯ ನೀಡುವುದೂ ಸೇರಿದಂತೆ ಹತ್ತುಹಲವು ಜನಸೇವೆಯ ಕಾರ್ಯಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅವರ ಮೇಲೆ ಐಟಿ ಇಲಾಖೆ ಕಣ್ಣು ಬಿದ್ದಿದ್ದು, ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸೂದ್ರ ನಿವಾಸ ಮತ್ತು ಇತರ ಸ್ಥಳಗಳ ಸಮೀಕ್ಷೆ ನಡೆಸಿದ್ದರು. 20 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪದೊಂದಿಗೆ, ಸೂದ್ರ ಚಾರಿಟಿ ಫೌಂಡೇಶನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು 17 ಕೋಟಿ ರೂ. ಹಣ ಸುಮ್ಮನೆ ಕುಳಿತಿದೆ ಎಂದಿದ್ದರು.
“सख्त राहों में भी आसान सफर लगता है,
— sonu sood (@SonuSood) September 20, 2021
हर हिंदुस्तानी की दुआओं का असर लगता है” 💕 pic.twitter.com/0HRhnpf0sY
ಇದಕ್ಕೆ ಉತ್ತರವೆಂಬಂತೆ, “ನನ್ನ ಫೌಂಡೇಶನ್ನಲ್ಲಿರುವ ಪ್ರತಿಯೊಂದು ರೂಪಾಯಿ ಕೂಡ ಒಂದು ಅಮೂಲ್ಯ ಜೀವವನ್ನು ಉಳಿಸಲು ಮತ್ತು ಅಗತ್ಯ ಇರುವವರನ್ನು ತಲುಪಲು ಅದರ ಸರತಿಗಾಗಿ ಕಾಯುತ್ತಿದೆ” ಎಂದು ಸೂದ್ ಬರೆದಿದ್ದಾರೆ. ಜೊತೆಗೆ, ಐಟಿ ಅಧಿಕಾರಿಗಳ ಪರಿಶೀಲನೆ ಕುರಿತು, “ನಾನು ಕೆಲವು ಅತಿಥಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದೆ. ಆದ್ದರಿಂದ ಕಳೆದ ನಾಲ್ಕು ದಿನ ನಿಮ್ಮ ಸೇವೆಯಲ್ಲಿ ತೊಡಗಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಿಮ್ಮ ಸೇವೆಗೆ ಹಾಜರಾಗಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ
ಐಟಿ ಇಲಾಖೆ ಹೇಳಿಕೆ: ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಸೂದ್ ಬೋಗಸ್ ಅನ್ಸೆಕ್ಯೂರ್ಡ್ ಲೋನ್ಗಳ ಹೆಸರಲ್ಲಿ ತೋರಿಸಿ 20 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ವಂಚಿಸಿದ್ದಾರೆ; ಅವರ ನಾನ್ಪ್ರಾಫಿಟ್ ಸಂಸ್ಥೆ, ಸೂದ್ ಚ್ಯಾರಿಟಿ ಫೌಂಡೇಶನ್, ಕಾನೂನುಬಾಹಿರವಾಗಿ ವಿದೇಶೀಯರಿಂದ 2.1 ಕೋಟಿ ರೂ. ಹಣ ಸಂಗ್ರಹಿಸಿದೆ; ಸೂದ್ ಫೌಂಡೇಶನ್ ಈವರೆಗೆ 18 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದರೂ, ಕೇವಲ 1.9 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ ಎಂದು ಐಟಿ ಅಧಿಕಾರಿಗಳು ಶನಿವಾರ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)
“ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ”
ನೀರು ತುಂಬಿದ್ದ ಅಂಡರ್ಪಾಸಲ್ಲಿ ಸಿಲುಕಿದ ಕಾರು: ರಜೆಗೆ ಊರಿಗೆ ಹೋಗಿದ್ದ ವೈದ್ಯೆ ದುರ್ಮರಣ
ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶಾತಿ ನಿಲ್ಲಬೇಕು: ದೆಹಲಿ ಹೈಕೋರ್ಟ್