ಹೈದರಾಬಾದ್: ಮದುವೆಯಾದ ಆರೇ ತಿಂಗಳಲ್ಲಿ ಮಗಳು ಆತ್ಮಹತ್ಯೆಗೆ ಶರಣು. ಇದಾದ ಕೆಲವೇ ತಿಂಗಳಲ್ಲಿ ಮಹಿಳೆಯೊಬ್ಬಳು ಅಳಿಯನನ್ನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಉಪ್ಪಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಮನಾಥಪುರದಲ್ಲಿ ಗುರುವಾರ (ಅ.29) ನಡೆದಿದೆ.
ಮೃತನನ್ನು ನವೀನ್ ಎಂದು ಗುರುತಿಸಲಾಗಿದೆ. ಈತನಿಗೆ ವಂದನಾ ಜತೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಗಂಡನ ವರ್ತನೆಯಿಂದ ಬೇಸತ್ತಿದ್ದ ವಂದನಾ ಮಾರ್ಚ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಸೂಸೈಡ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ವಂದನಾ ತಾಯಿ ಅನಿತಾ, ಅಳಿಯ ನವೀನ್ನನ್ನು ಮನೆಗೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ: ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ರೋಚಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರ ಪ್ರಶಾಂತ್!
ಇನ್ನು ಮದುವೆಗೂ ಮುಂಚೆಯೇ ಅತ್ತೆ ಅನಿತಾ ಮತ್ತು ಅಳಿಯ ನವೀನ್ ನಡುವೆ ವಿವಾಹೇತರ ಸಂಬಂಧ ಇತ್ತು ಎಂದು ಶಂಕಿಸಲಾಗಿದೆ. ಒಂದೆಡೆ ಅತ್ತೆ ಮತ್ತು ಗಂಡನ ಕಿರುಕುಳ ಹಾಗೂ ತಾಯಿಯೊಂದಿಗೆ ಗಂಡನ ಅಕ್ರಮ ಸಂಬಂಧದಿಂದ ಮನನೊಂದು ವಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ.
ಆತ್ಮಹತ್ಯೆ ಪ್ರಕರಣದಲ್ಲಿ ನವೀನ್ ಬಿಡುಗಡೆಯಾದ ಬಳಿಕವೂ ಅತ್ತೆಯೊಂದಿಗೆ ನವೀನ್ ತನ್ನ ಸಂಬಂಧ ಮುಂದುವರಿಸಿದ್ದ ಎನ್ನಲಾಗಿದೆ. ಇದರ ನಡುವೆ ಅನಿತಾಗೆ ಕಿರುಕುಳ ಕೊಡಲು ನವೀನ್ ಶುರು ಮಾಡಿದ್ದನಂತೆ. ಹೀಗಾಗಿ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಆರೋಪಿ ಅನಿತಾ ಬಾಯ್ಬಿಟ್ಟಿದ್ದಾಳೆ.
ಸದ್ಯ ಅನಿತಾಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ನವೀನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!