ಮುಂಬೈ: ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಲು ಪುತ್ರ ನಿರಾಕರಿಸಿದ. ಆದರೆ, ಸ್ಥಳೀಯ ಮುಸ್ಲಿಂ ಸಮುದಾಯದ ಸಂಘಟನೆಯೊಂದು ಹಿಂದು ಪದ್ಧತಿಯಂತೆ ಶವಕ್ಕೆ ಕೊಳ್ಳಿಯಿಟ್ಟು ಅಂತ್ಯಕ್ರಿಯೆ ನೆರವೇರಿಸಿ ಮತೀಯ ಸೌಹಾರ್ದತೆ ಮೆರೆದಿದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ನಂದೇ ಈ ಕಾರ್ಯ ಮಾಡಿರುವುದು ಮತ್ತೂ ವಿಶೇಷವಾಗಿದೆ.
ಮಹಾರಾಷ್ಟ್ರದ ಅಕೋಲಾದ ನಿವಾಸಿಯಾಗಿದ್ದ 78 ವರ್ಷದ ಹಿರಿಯ ನಾಗರಿಕರ ಪತ್ನಿ ಅವರಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಇದೇ ವೇಳೆ ಅವರ ಪತಿ ಮನೆಯಲ್ಲಿ ಕುಸಿದು ಬಿದ್ದಿದ್ದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕನಿಗೆ ಕರೊನಾ
ತಕ್ಷಣವೇ ಆಂಬುಲೆನ್ಸ್ ಅನ್ನು ಅವರ ಮನೆಗೆ ಕಳುಹಿಸಿ, ಹಿರಿಯ ನಾಗರಿಕರನ್ನು ಪರೀಕ್ಷಿಸಿದಾಗ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು. ಈ ವಿಷಯವನ್ನು ನಾಗ್ಪುರದಲ್ಲಿ ವಾಸವಾಗಿರುವ ಮೃತರ ಪುತ್ರನಿಗೆ ತಿಳಿಸಲಾಯಿತು. ಆದರೆ, ಆತ ತನ್ನ ಅಪ್ಪನ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ. ಈ ಹಿನ್ನೆಲೆಯಲ್ಲಿ ಅಕೋಲಾದ ಅಕೋಲಾ ಕಚ್ಚಿ ಮೆಮೂನ್ ಜಮಾತ್ ಎಂಬ ಸಂಘಟನೆಯ ಸದಸ್ಯರು ಮೃತರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದರು ಎಂದು ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ವಚ್ಛತಾ ವಿಭಾಗದ ಮುಖ್ಯಸ್ಥ ಪ್ರಶಾಂತ್ ರಾಜೂರ್ಕರ್ ತಿಳಿಸಿದ್ದಾರೆ.
ಮೃತಪಟ್ಟವರು ಹಿಂದು ಧರ್ಮೀಯರು ಎಂಬುದು ಗೊತ್ತಾಗಿತ್ತು. ಹಾಗಾಗಿ ಅವರ ಪದ್ಧತಿಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಯಿತು. ಸಾಮಾನ್ಯವಾಗಿ ನಮ್ಮ ಸಂಘಟನೆಯ ಸದಸ್ಯರು ಚಿತೆಯನ್ನು ನಿರ್ಮಿಸಿ, ಅದರ ಮೇಲೆ ಶವ ಇರಿಸುವವರೆಗೆ ಕೆಲಸ ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ಹಿಂದು ಪದ್ಧತಿಯಂತೆ ಚಿತೆಗೆ ಬೆಂಕಿಯನ್ನೂ ಕೊಟ್ಟೆವು ಎಂದು ಅಕೋಲಾ ಕಚ್ಚಿ ಮೆಮೂನ್ ಜಮಾತ್ನ ಅಧ್ಯಕ್ಷ ಜಾವೇದ್ ಝಕಾರಿಯಾ ತಿಳಿಸಿದ್ದಾರೆ.
ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದ್ದರೆ, ಈ ವಿಜ್ಞಾನಿಗಳ ಹೋರಾಟವೇ ಬೇರೆಯದ್ದು…!