ಬೀರ್ಭಮ್ (ಪಶ್ಚಿಮ ಬಂಗಾಳ): ಲಡಾಖ್ನಲ್ಲಿ ಚೀನಾ ಚೀನಾದ ಸೈನ್ಯದೊಂದಿಗೆ ನಡೆಯುತ್ತಿರುವ ಘರ್ಷಣೆಯ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಪೈಕಿ ಒಬ್ಬರು ಪಶ್ಚಿಮ ಬಂಗಾಳದ ಬೀರ್ಭಮ್ನ ಯೋಧ ರಾಜೇಶ್ ಒರಾಂಗ್ ಕೂಡ ಒಬ್ಬರು.
23 ವರ್ಷದ ರಾಜೇಶ್ ಅವರು ಕಳೆದ ತಿಂಗಳೇ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಬರಬೇಕಿತ್ತು. ಅವರಿಗೆ ರಜೆಯೂ ಘೋಷಣೆಯಾಗಿತ್ತು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಲಾಕ್ಡೌನ್ ಸಡಿಲಿಕೆ ನಂತರ ಮನೆಗೆ ಬರುವ ಸಿದ್ಧತೆಯಲ್ಲಿದ್ದಾಗಲೇ ಚೀನಾದ ಸಮರದ ವಿಷಯ ತಿಳಿದು ರಜೆ ಸಿಗಲಿಲ್ಲ.
ಇಡೀ ಕುಟುಂಬದ ಏಕೈಕ ಆಸರೆಯಾಗಿರುವ ರಾಜೇಶ್ ಅವರು ತಂಗಿಯ ಮದುವೆಯ ಸಿದ್ಧತೆಯಲ್ಲಿ ಇದ್ದರು. ಹಾಸಿಗೆ ಹಿಡಿದಿರುವ ತಂದೆಯ ಜವಾಬ್ದಾರಿಯ ಜತೆಗೆ ತಂಗಿಯ ಮದುವೆಯ ಭಾರವನ್ನು ಹೊತ್ತಿದ್ದ ರಾಜೇಶ್ ಅವರು ಮನೆಗೆ ಮರಳಿ, ಮದುವೆಯ ಸಿದ್ಧತೆ ಸಂಪೂರ್ಣಗೊಳಿಸಿ ಹೋಗುವವರಿದ್ದರು.
ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು. ಅಣ್ಣ ಮನೆಗೆ ಬರುವವನೆಂದು ಕಾಯುತ್ತಿದ್ದ ತಂಗಿ ಹಾಗೂ ಹಾಸಿಗೆಯ ಮೇಲಿನಿಂದಲೇ ಮಗನ ಬರುವಿಕೆಗಾಗಿ ಕಾಯುತ್ತಿದ್ದ ಅಪ್ಪ ಇಬ್ಬರಿಗೂ ಸಿಕ್ಕಿದ್ದು ರಾಜೇಶ್ ಅವರ ನಿಧನದ ಸುದ್ದಿ!
ಇದನ್ನೂ ಓದಿ: ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು
ಇದೀಗ ಇಡೀ ಕುಟುಂಬಕ್ಕೆ ಗರ ಬಡೆದಂತಾಗಿದೆ. ಜೀವನಕ್ಕೆ ಆಧಾರವಾಗಿದ್ದ ಏಕೈಕ ಆಧಾರಸ್ತಂಭವನ್ನೇ ಕಳೆದುಕೊಂಡು ಕುಟುಂಬ ಕಂಗೆಟ್ಟು ಹೋಗಿದೆ.
ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಮುಖಾಮುಖಿಯಲ್ಲಿ ಕೊಲ್ಲಲ್ಪಟ್ಟ 20 ಜನ ಜವಾನ್ಗಳಲ್ಲಿ ರಾಜೇಶ್ ಒರಾಂಗ್ ಒಬ್ಬರು. 6 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. 16 ಬಿಹಾರ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘರ್ಷಣೆಯಲ್ಲಿ ಗಾಯಗೊಂಡ ನಂತರ ರಾಜೇಶ್ ಒರಾಂಗ್ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆಯ ಹೊತ್ತಿಗೆ, ಅವರ ನಿಧನದ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಲಾಯಿತು. ಈಗ ಇಡೀ ಕುಟುಂಬಕ್ಕೆ ಆದಾಯವಿಲ್ಲವಾಗಿದೆ. ಸಹಾಯಕ್ಕಾಗಿ ಸರ್ಕಾರದ ಮೊರೆ ಹೋಗಬೇಕಿದೆ. ದಿಕ್ಕೇ ತೋಚದೇ ಕುಟುಂಬ ಕಣ್ಣೀರು ಹಾಕುತ್ತಿದೆ ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದರು. (ಏಜೆನ್ಸೀಸ್)