ಮಹಾಲಿಂಗಪುರ: ಕಾವ್ಯ, ಸಂಗೀತ ಜಗತ್ತಿನ ಶ್ರೇಷ್ಠ ಅಭಿವ್ಯಕ್ತಿಗಳಾಗಿದ್ದು, ಸಾಮರಸ್ಯದ ಮಹಾಪ್ರವಾಹವೇ ಸಂಗೀತವಾಗಿದೆ. ಕಲೆಗಳು ಜೀವಂತವಾಗಿರುವಲ್ಲಿ ಮಾತ್ರ ಸಮಾಜ ಜೀವಂತವಾಗಿರುತ್ತದೆ ಎಂದು ಬನಹಟ್ಟಿಯ ಖ್ಯಾತ ಸಾಹಿತಿ ಡಾ.ಸಿದ್ದರಾಜ ಪೂಜಾರಿ ಹೇಳಿದರು.
ಸ್ಥಳೀಯ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದಲ್ಲಿ ಮಹಾಲಿಂಗಪುರ ಗೆಳೆಯರ ಬಳಗ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದುಸ್ತಾನಿ ಶಾಸ್ತ್ರೀಯ ಶ್ರಾವಣ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಸಂಗೀತ ಕೇಳುವುದರಿಂದ ಮನಸ್ಸಿನಲ್ಲಿಯ ಋಣಾತ್ಮಕ ವಿಚಾರಗಳು ಹೊರಹೋಗಿ ಧನಾತ್ಮಕ ವಿಚಾರಗಳು ಮೊಳಕೆಯೊಡೆಯುತ್ತವೆ. ಸಂಗೀತ ಭಗವಂತ ಭೂಮಿಗೆ ಕೊಟ್ಟ ಅದ್ಭುತ ಶಕ್ತಿಯಾಗಿದೆ. ಮನುಷ್ಯನ ಮನಸ್ಸನ್ನು ಸಹಜ ಸ್ಥಿತಿಗೆ ತರುವ ದಿವ್ಯ ಶಕ್ತಿ, ದೇಶಾಭಿಮಾನ ಮತ್ತು ಭಾಷಾಭಿಮಾನ ಮೂಡಿಸುವ ಪ್ರಬಲ ಅಸವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಸದಸ್ಯ ಜಯವಂತ ಕಾಗಿ, ಶಿವಲಿಂಗ ಕೌಜಲಗಿ, ಸುರೇಶ ಹೊಸೂರ, ಡಾ.ಮಂಜುನಾಥ ಚನ್ನಾಳ ಮಾತನಾಡಿದರು.
ಪಂ.ಬಾಲಚಂದ್ರ ನಾಕೋಡ ಅವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿ ನೆರೆದವರ ಮನ ಸೂರೆಗೊಂಡಿತು. ರಾಜೇಶ ಬಾವಿಕಟ್ಟಿ, ಡಾ.ಎಂ.ಬಿ.ಪೂಜಾರಿ, ಕಾನಿಪ ಅಧ್ಯಕ್ಷ ಮಹೇಶ ಆರಿ, ಕಾರ್ಯದರ್ಶಿ ಮೀರಾ ತಟಗಾರ ವೇದಿಕೆಯಲ್ಲಿದ್ದರು. ಚಂದ್ರು ಕದ್ದಿಮನಿ ಪ್ರಾರ್ಥಿಸಿದರು. ಭೀಮಪ್ಪ ನೇಗಿನಾಳ ನಿರೂಪಿಸಿದರು. ಲಕ್ಷ್ಮಣ ಕಿಶೋರಿ ವಂದಿಸಿದರು.