ಹೊಸಪೇಟೆ: ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಉಚಿತ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಮಠ ಮಾನ್ಯಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಶ್ರೀ ಕೊಟ್ಟೂರು ಸಂಸ್ಥಾನಮಠದ ಆವರಣದಲ್ಲಿ ಪ್ರೌಢದೇವರಾಯ ಉಚಿತ ವಸತಿಯುತ ಪ್ರಸಾದ ನಿಲಯ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಠಮಾನ್ಯಗಳ ಆಸ್ತಿಯನ್ನು ನುಂಗುವವರೇ ಹೆಚ್ಚಿದ್ದಾರೆ. ಮನುಷ್ಯರಿಗೆ ಆಸೆಗಳು ಜಾಸ್ತಿಯಾಗಿವೆ. ಈ ನಡುವೆಯೂ ಬಡವರು, ಅನಾಥರು, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಉಚಿತ ಪ್ರಸಾದ ನಿಲಯ ನಿರ್ಮಿಸಲು ಮುಂದಾಗಿರುವ ಮಠದ ಕಾರ್ಯ ಶ್ಲಾಘನೀಯ ಎಂದರು.
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮಾತನಾಡಿ, ಶ್ರೀಮಠ ಹಲವಾರು ಸೇವೆ ಮಾಡುತ್ತಾ ಬಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಡಾ.ಸಂಗನಬಸವ ಸ್ವಾಮೀಜಿ, ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ದೇವರು, ಕೊಟ್ಟೂರು ದೇಶೀಕರು ಆಶೀರ್ವಚನ ನೀಡಿದರು. ಹುಡಾ ಅಧ್ಯಕ್ಷ ಅಶೋಕ್ ಜೀರೆ, ನಿವೃತ್ತ ಇಂಜಿನಿಯರ್ ಆರ್.ಬಿ.ಪಾಟೀಲ್, ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಅಧ್ಯಕ್ಷ ಎಚ್.ಶರಣಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ, ವಿಕಾಸ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ಬಿ.ನಾಗರಾಜಗೌಡ, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ಕೋರಿಶೆಟ್ಟಿ ಲಿಂಗಪ್ಪ, ಆರ್.ಪಿ.ಪ್ರಕಾಶ್, ಅಶ್ವಿನ್ ಕೋತಂಬರಿ ಇತರರಿದ್ದರು.
ಪಂಚಮಸಾಲಿ, ಬಲಿಜ, ಬೇಡ ಜಂಗಮವೆಂದು ಒಳಪಂಗಡ ಮಾಡಿಕೊಂಡು ಹೋರಾಟ ಮಾಡುವುದು ಸರಿಯಲ್ಲ. ಎಲ್ಲರೂ ಒಂದಾಗಿರಬೇಕು. ಒಗ್ಗಟ್ಟಿನ ಸಮಾಜವನ್ನು ನಾನು ಎಂದಿಗೂ ಬೆಂಬಲಿಸುತ್ತೇನೆ.
| ಡಾ.ಸಂಗನಬಸವ ಸ್ವಾಮೀಜಿ, ಕೊಟ್ಟೂರುಸ್ವಾಮಿ ಸಂಸ್ಥಾನ ಮಠ