More

    ಚಕ್ರವರ್ತಿ ಸೂಲಿಬೆಲೆಯವರ ಅಂಕಣ: ಅಟ್ಟಿಸಿಕೊಂಡು ಬಡಿಯುತ್ತವೆ ಸಾಮಾಜಿಕ ಜಾಲತಾಣಗಳು!

    ಮೋದಿಯಾದರೂ ಆಗೀಗ ಸಾರ್ವಜನಿಕ ಸಮಾರಂಭಗಳಲ್ಲಿ ಮಮತಾ ಬ್ಯಾನರ್ಜಿಯನ್ನೋ, ಸಿದ್ದರಾಮಯ್ಯನವರನ್ನೋ ಆಡಿಕೊಂಡದ್ದು ಕೇಳಿದ್ದೇವೆ. ರಾಹುಲ್ ಮಾತ್ರ ತನ್ನ ಬೈದವರಿಗೆ ಉತ್ತರಿಸುವುದೇ ಇಲ್ಲ. ಈ ಪರಿಯ ಸ್ಥಿತಪ್ರಜ್ಞತೆ ಅಧ್ಯಯನ ಯೋಗ್ಯವೇ ಸರಿ.

    ಚಕ್ರವರ್ತಿ ಸೂಲಿಬೆಲೆಯವರ ಅಂಕಣ: ಅಟ್ಟಿಸಿಕೊಂಡು ಬಡಿಯುತ್ತವೆ ಸಾಮಾಜಿಕ ಜಾಲತಾಣಗಳು!ಇದು ಸಾಮಾಜಿಕ ಜಾಲತಾಣಗಳ ಯುಗ. ತನ್ನ ವಿಚಾರ ಪ್ರಕಟವಾಗಲು ಯಾರು ಯಾರ ಮರ್ಜಿಗೂ ಕಾಯಬೇಕಿಲ್ಲ. ಅವನ ಫೇಸ್​ಬುಕ್ಕು, ಅವನಿಚ್ಛೆ. ವಾಕ್​ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಅತ್ಯಂತ ವಿಪರೀತ ಯುಗದಲ್ಲಿ ನಾವಿದ್ದೇವೆ. ಫೇಸ್​ಬುಕ್ ಒಂದು ಬಗೆಯದ್ದಾದರೆ ವಾಟ್ಸಪ್ ಇಲ್ಲಿನ ವಿಚಾರಗಳನ್ನು ಮನೆ-ಮನೆಗೂ ಮುಟ್ಟಿಸುವ ತಾಕತ್ತುಳ್ಳಂಥದ್ದು. ಒಬ್ಬ ವ್ಯಕ್ತಿಯನ್ನು ಒಂದು ರಾತ್ರಿಯಲ್ಲಿ ಹೀರೋ ಮಾಡಿ, ಬೆಳಗ್ಗೆ ಸೂರ್ಯೋದಯವಾಗುವಷ್ಟರಲ್ಲಿ ಅವನನ್ನು ಭಿಕಾರಿಯಾಗಿಸಿಬಿಡಬಲ್ಲ ಸಾಮರ್ಥ್ಯ ಅದಕ್ಕಿದೆ. ಮೊದಲೇ ಹೆಂಡ ಕುಡಿದ ಮಂಗಕ್ಕೆ ಚೇಳೂ ಕಡಿದು, ದೆವ್ವವೂ ಮೆಟ್ಟಿಕೊಂಡರೆ ಹೇಗಾಗಬಹುದೋ ಅಂತೆ ಟಿಕ್​ಟಾಕ್ ಕೂಡ. ಇಲ್ಲಿ ತನ್ನ ಪ್ರತಿಭೆಯನ್ನು ಬಳಸಿ ಯಾವ ವಿಚಾರವನ್ನೂ ಯಾರು ಬೇಕಾದರೂ ಹೇಳಬಹುದಲ್ಲದೆ ಮತ್ತೊಬ್ಬರ ವೈಯಕ್ತಿಕ ನಿಂದೆಯನ್ನೂ ಕೂಡ ಮಾಡಿ ಜಯಿಸಿಕೊಂಡುಬಿಡಬಹುದು. ಆ ವಿಡಿಯೋಗೆ ಸಿಕ್ಕ ಲೈಕುಗಳ ಆಧಾರದ ಮೇಲೆ ನಿಂದಿಸಲ್ಪಟ್ಟ ವ್ಯಕ್ತಿಯ ಭವಿಷ್ಯವನ್ನು ಸಮಾಜ ನಿರ್ಧರಿಸುತ್ತದೆ. ಕಲಿಯುಗ ಇದಕ್ಕಿಂತಲೂ ಕೆಟ್ಟ ಸ್ಥಿತಿಗೆ ತಲುಪಬಲ್ಲದೇ ಎಂಬುದು ಪ್ರಶ್ನಾರ್ಥಕ ಚಿಹ್ನೆ ಅಷ್ಟೇ!

    ಹಾಗಂತ ಇದು ಸವಾಲನ್ನು ಕೊಡಬಲ್ಲ ದಿನಗಳೂ ಹೌದು. ಮೊದಲೆಲ್ಲ ಅಪ್ಪ ನಾಯಕನಾಗಿದ್ದರೆ ಮಗ ಸಲೀಸಾಗಿ ನಾಯಕನಾಗಿಬಿಡುತ್ತಿದ್ದ. ಇರುವ ನಾಲ್ಕು ಪತ್ರಿಕೆಗಳ ನಾಲ್ಕು ಪತ್ರಕರ್ತರ ಮನಮೆಚ್ಚುವಂತೆ ನಡೆದುಕೊಂಡಿದ್ದರೆ ಸಾಕಿತ್ತು. ಅವರು ಒಳ್ಳೆಯ ಸಂಗತಿಗಳನ್ನು ಬರೆಬರೆದೇ ಅಪ್ಪನ ಮಗನನ್ನು ನಾಯಕನನ್ನಾಗಿಸಿಬಿಡುತ್ತಿದ್ದರು. ಈಗ ಪತ್ರಿಕೆಗಳು ಮನೆಸೇರುವ 24 ಗಂಟೆ ಮುನ್ನವೇ ಆಯಾ ವ್ಯಕ್ತಿಗಳ ಬಂಡವಾಳಗಳು ಹರಾಜಾಗಿ ಸಾಮಾಜಿಕ ಜಾಲತಾಣಗಳ ಭಾಷೆಯಲ್ಲೇ ವೈರಲ್ಲೂ ಆಗಿಬಿಟ್ಟಿರುತ್ತವೆ. ಇದಕ್ಕೆ ಸಮರ್ಥ ಉದಾಹರಣೆ ಮಂಡ್ಯದ ಚುನಾವಣೆಯೇ. ಸುಮಲತಾರಂತೆ ಮೂರು ಸುಮಲತಾರನ್ನು ಕಣಕ್ಕಿಳಿಸಿದರೂ, ಅವರು ಖರ್ಚು ಮಾಡಿದ್ದಕ್ಕಿಂತ ಹತ್ತು ಪಟ್ಟು ಹಣ ಖರ್ಚು ಮಾಡಿದರೂ, ಸರ್ಕಾರಿ ಯಂತ್ರವನ್ನೇ ಕೈಲಿಟ್ಟುಕೊಂಡು ಬೇಕಾದ್ದನ್ನು ಮಾಡಿಬಿಡುವ ಸಾಮರ್ಥ್ಯ ಇಟ್ಟುಕೊಂಡಿದ್ದಾಗಲೂ ಆಗಿನ ಮುಖ್ಯಮಂತ್ರಿಯವರ ಮಗ ಸೋಲುಣ್ಣಬೇಕಾಯ್ತು. ಹತ್ತು ವರ್ಷಗಳ ಹಿಂದೆ ಇಂಥದ್ದನ್ನು ಆಲೋಚಿಸಬಹುದಾಗಿತ್ತೇನೂ?! ಜಾಲತಾಣಗಳು ಏನನ್ನು ಬೇಕಿದ್ದರೂ ಮಾಡಿಬಿಡುವ ಸಾಮರ್ಥ್ಯ ಹೊಂದಿವೆ ಎಂಬುದಕ್ಕೆ ಇದು ಉದಾಹರಣೆಯಷ್ಟೇ. ಮಾಧ್ಯಮವೊಂದು ಸುಮಲತಾರಿಗೆ ಕೊಟ್ಟಿರುವ ಸಂಖ್ಯೆಯ ಕುರಿತಂತೆ ಮುಂಚಿನ ದಿನ ಬಿತ್ತಲು ಬಯಸಿದ್ದ ಸುಳ್ಳನ್ನು ನೆಟ್ಟಿಗರು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಿದ್ದಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಸತ್ಯ ತಿಳಿಯುವಂತೆ ಮಾಡಿದ್ದು ಕಣ್ಣೆದುರಿಗೇ ಕಂಡ ಕ್ರಾಂತಿ! ಅದಕ್ಕೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಸ್ವೀಕರಿಸುವುದನ್ನು ಕಲಿತರೆ ಶ್ರೇಷ್ಠ ನಾಯಕನಾಗಬಹುದಲ್ಲದೆ ಶ್ರೀಕೃಷ್ಣ ಹೇಳುವ ಸಮಚಿತ್ತದ ಅನುಭೂತಿಯನ್ನೂ ಪಡೆಯಬಹುದು.

    2013ರಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೊಷಿಸಿದಾಗ ಕಾಂಗ್ರೆಸ್ಸು ಹಿಂದೆಂದೂ ಅನುಭವಿಸದಷ್ಟು ತಳಮಳವನ್ನು ಕಂಡಿತ್ತು. ಆಡ್ವಾಣಿಯೇ ಅಭ್ಯರ್ಥಿಯಾಗಿ ರಾಹುಲ್ ಸಲೀಸಾಗಿ ಗದ್ದುಗೆ ಏರಿಬಿಡುತ್ತಾರೆ ಎಂಬ ಅವರ ಭರವಸೆ ದಿಕ್ಕು ತಪ್ಪಿತು. ಆದರೆ ಮೋದಿ ಗುಜರಾತಿಗೆ ಮಾತ್ರ ಸೀಮಿತವಾದವರು, ಹೆಚ್ಚೆಂದರೆ ಅಲ್ಲಿಂದಾಚೆಗೆ ಒಂದಷ್ಟು ಕಟ್ಟರ್ ಹಿಂದುವಾದಿಗಳು ಮಾತ್ರ ಅವರನ್ನು ಬಯಸುತ್ತಾರೆ ಎಂದರಿತಿದ್ದ ಕಾಂಗ್ರೆಸ್ಸಿಗೆ ಹೋರಾಟ ಕಠಿಣವೇನೂ ಆಗಿರಲಿಲ್ಲ. ಆದರೆ ಭಾರತೀಯ ರಾಜಕೀಯ ನಾಯಕರಲ್ಲೆಲ್ಲ ಅತ್ಯಂತ ಹೆಚ್ಚು ಜಾಲತಾಣಗಳನ್ನು ಬಳಸುವ ವ್ಯಕ್ತಿ ಎಂದು ಬಿಂಬಿತಗೊಂಡಿದ್ದ ಮೋದಿ ಬಲುಬೇಗನೇ ರಾಷ್ಟ್ರನಾಯಕರಾಗಿ ಬೆಳೆದುಬಿಟ್ಟರು. ಈ ಬಗೆಯ ಬೌದ್ಧಿಕವಲಯ ಅಂದಿನ ದಿನಗಳಲ್ಲಿ ಇದ್ದಿದ್ದು ಆಮ್​ಆದ್ಮಿ ಪಾರ್ಟಿಯೊಂದಿಗೆ ಮಾತ್ರ. ಕಾಂಗ್ರೆಸ್ಸು ಅವರ ಬೆಂಬಲವನ್ನು ಪಡೆದು ಮೋದಿಯನ್ನು ಹೀಗಳೆಯುವ ಕೆಲಸ ಆರಂಭಿಸಿತು. ಹೀಗೆ ವ್ಯಾಪಕವಾಗಿ ಜರಿದಾಗ ವ್ಯಕ್ತಿಯೊಬ್ಬನಿಗೆ ಇರುವುದು ಎರಡೇ ಅವಕಾಶ. ಮೊದಲನೆಯದು ಈ ಕೆಳಹಂತದ ಟೀಕೆಗಳಿಗೆ ಪ್ರತಿಕ್ರಿಯಿಸುವುದು. ಎರಡನೆಯದು ಅದನ್ನು ಕಡೆಗಣಿಸಿ ಮುನ್ನಡೆಯುವುದು. ಬಹುತೇಕ ರಾಜಕೀಯ ನಾಯಕರು ಎಡವೋದು ಇಲ್ಲಿಯೇ. ಯಡಿಯೂರಪ್ಪನವರ ಮೊದಲನೇ ಅವಧಿಯ ಸರ್ಕಾರವನ್ನು ನೆನಪಿಸಿಕೊಳ್ಳಿ. ಅತ್ಯಂತ ಸಾಮಾನ್ಯ ರಾಜಕೀಯ ವ್ಯಕ್ತಿ ಮಾಡಿದ ಟೀಕೆಗೂ ಅವರು ಮಾಧ್ಯಮಗಳ ಮುಂದೆ ಆಕ್ರೋಶಭರಿತರಾಗಿ ಉತ್ತರಿಸುತ್ತಿದ್ದರು. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅದು ಹಬ್ಬ. ಅವರ ಎಲ್ಲ ಒಳ್ಳೆಯ ಕೆಲಸಗಳನ್ನು ಈ ಆಕ್ರೋಶಭರಿತ ಮಾತುಗಳು ನುಂಗಿಬಿಟ್ಟವು. ಮಾಧ್ಯಮಗಳಿಗೆ ಅವರು ಎಷ್ಟು ಉತ್ತರಿಸುವ ಪ್ರಯತ್ನ ಮಾಡಿದರೋ ಅಷ್ಟೇ ಅವರ ಪ್ರಭೆ ಇಳಿಯುತ್ತ ಹೋಯ್ತು. ಆದರೆ ಮೋದಿ ಹಾಗಲ್ಲ. ಟೀಕಾಕಾರರಿಗೆ ಅವರು ಮಾಧ್ಯಮದಲ್ಲಿ ಉತ್ತರಿಸುವುದೇ ಇಲ್ಲ. ಟೀಕೆ ಮಾಡಿದ ಅಥವಾ ಬೈಗುಳಗಳನ್ನು ನೀಡಿದ ಮರುಕ್ಷಣವೇ ಅವರು ಉತ್ತರಿಸುವುದನ್ನು ಯಾರು ನೋಡಿಯೇ ಇಲ್ಲ. ಹಾಗಂತ ಉತ್ತರಿಸದೇ ಇರುವುದಿಲ್ಲ. ಸಮಯಕ್ಕಾಗಿ ಕಾಯುತ್ತಾರೆ ಮತ್ತು ಈ ವಿಚಾರಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ. ಹೇಳುತ್ತಾರಲ್ಲ ಕೋಪ ಬಂದಾಗ ಕೂಗಾಡುವುದಕ್ಕೆ ಹೆಚ್ಚು ಶಕ್ತಿ ಬೇಕಿಲ್ಲ, ಶಾಂತವಾಗಿರುವುದಕ್ಕೆ ನಿಜಕ್ಕೂ ಶಕ್ತಿ ಸಂಚಯವಾಗಿರಬೇಕು ಅಂತ. ಅರವಿಂದ್ ಕೇಜ್ರಿವಾಲ್ ಒಮ್ಮೆ ಮೋದಿ ತನ್ನ ಹೆಸರು ಹೇಳಿಬಿಡಲೆಂದು ಅದೆಷ್ಟು ಪ್ರಯತ್ನಪಟ್ಟರೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಪುಣ್ಯಾತ್ಮ ಇಂದಿನವರೆಗೂ ಒಮ್ಮೆಯಾದರೂ ವೇದಿಕೆಯ ಮೇಲೆ ಅವರ ಹೆಸರನ್ನೆತ್ತಿಲ್ಲ. ಕೇಜ್ರಿವಾಲರ ಬೈಗುಳಗಳಿಗೆ ಅವರು ಸಾರ್ವಜನಿಕ ಸಮಾರಂಭದಲ್ಲಿ ಉತ್ತರಿಸುತ್ತಿಲ್ಲ ಬದಲಿಗೆ ಅವರು ಉರಿಸಿಕೊಳ್ಳ ಬಹುದಾದಂತಹ ಕೆಲಸಗಳನ್ನೇ ಮಾಡುತ್ತ ಜನರಿಗೆ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ!

    ಈ ನಿಟ್ಟಿನಲ್ಲಿ ನೋಡಿದರೆ ರಾಹುಲ್ ಒಂದು ತೂಕ ಮೇಲು. ಮೋದಿಯಾದರೂ ಆಗೀಗ ಸಾರ್ವಜನಿಕ ಸಮಾರಂಭಗಳಲ್ಲಿ ಮಮತಾ ಬ್ಯಾನರ್ಜಿಯನ್ನೋ, ಸಿದ್ದರಾಮಯ್ಯನವರನ್ನೋ ಆಡಿಕೊಂಡದ್ದು ಕೇಳಿದ್ದೇವೆ. ರಾಹುಲ್ ಮಾತ್ರ ತನ್ನ ಬೈದವರಿಗೆ ಉತ್ತರಿಸುವುದೇ ಇಲ್ಲ. ಉತ್ತರಿಸುವ ಸಾಮರ್ಥ್ಯ ಇಲ್ಲದೆ ಇರಬಹುದು ಅಥವಾ ಅದನ್ನೂ ಆನಂದಿಸುವುದನ್ನು ಕಲಿತುಬಿಟ್ಟಿರಬಹುದು. ರಾಹುಲ್​ರನ್ನು ಟ್ರೋಲ್ ಮಾಡಿದಷ್ಟು ದೇಶದ ಜನ ಮತ್ಯಾರನ್ನೂ ಮಾಡಿಲ್ಲ. ಆದರೂ ರಾಹುಲ್ ತನ್ನ ರೀತಿ-ನೀತಿಗಳನ್ನು ಬಿಟ್ಟೂ ಇಲ್ಲ. ಈ ಪರಿಯ ಸ್ಥಿತಪ್ರಜ್ಞತೆ ಅಧ್ಯಯನ ಯೋಗ್ಯವೇ ಸರಿ. ಇದಕ್ಕೆ ಪಕ್ಕಾ ವಿರೋಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು! ತೆಗಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಜೀವ ಅವರದ್ದು. ಮತ್ತೆ ಮಂಡ್ಯ ಚುನಾವಣೆಗೇ ಹೊರಳುವುದಾದರೆ ಮೊತ್ತಮೊದಲು ಅವರು ಮಾಡಿದ ತಪ್ಪು ಮಗನ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಹೋಗಿದ್ದು. ದೂರ ಇದ್ದು ಮಗನನ್ನು ಗೆಲ್ಲಿಸಿಕೊಳ್ಳುವ ತಾಕತ್ತು ಹೊಂದಿದ್ದೇನೆ ಎಂದು ಅವರು ಸಂದೇಶ ಕೊಟ್ಟಿದ್ದರೆ ಅರ್ಧ ಚುನಾವಣೆ ಗೆದ್ದಿರುತ್ತಿದ್ದರು. ಆದರೆ ಪ್ರತ್ಯಕ್ಷ ರಣಾಂಗಣದಲ್ಲಿ ಭಾಗವಹಿಸಿ ತಾವೇ ಟೀಕೆಗೆ ಕೇಂದ್ರವಾದರು. ಜನಾನುರಾಗವನ್ನು ಗಳಿಸಿದ್ದ ಯಶ್-ದರ್ಶನ್​ರನ್ನು ಈ ಕಾರಣಕ್ಕೆ ತುಚ್ಛವಾಗಿ ನಿಂದಿಸಿ ಜನರ ಅಭಿಪ್ರಾಯವನ್ನು ಕ್ರೋಡೀಕರಿಸುತ್ತ ಹೋದರು.

    ಹಾಗೆ ಸುಮ್ಮನೆ ನೆನಪಿಸಿಕೊಳ್ಳಿ, ಆ ದಿನಗಳಲ್ಲಿ ಯಶ್, ದರ್ಶನ್, ಸುಮಲತಾ ಮೂವರೂ ಕೊಡುತ್ತಿದ್ದ ಹೇಳಿಕೆಗಳು ವ್ಯವಸ್ಥಿತವಾಗಿ ಸ್ಕಿ›ಪ್ಟ್ ಮಾಡಿದಂತಿರುತ್ತಿತ್ತು. ಕುಮಾರಸ್ವಾಮಿಯವರ ಮಾತುಗಳಿಗೆ ಉತ್ತರಿಸುತ್ತಲೇ ಸ್ತ್ರೀಯರನ್ನು, ರೈತರನ್ನು, ಜನಸಾಮಾನ್ಯರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಮಾಡುತ್ತಲೇ ಹೋದರು. ಟೀಕೆಗಳನ್ನು ಸಮರ್ಥವಾಗಿ ಎದುರಿಸಲು ಎದೆಗಾರಿಕೆ ಇರಬೇಕು ಮತ್ತು ಟೀಕೆಗಳನ್ನು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳಲು ಬೌದ್ಧಿಕ ಸಾಮರ್ಥ್ಯ ಇರಬೇಕು. ಕುಮಾರಸ್ವಾಮಿಯವರ ಈ ಪರಿಯ ಸೋಲು ಅಲ್ಲಿಗೇ ನಿಲ್ಲಲಿಲ್ಲ. ಉಪಚುನಾವಣೆಯಲ್ಲಿ ಅದರ ಪ್ರಭಾವ ಮುಂದುವರಿಯಿತು. ಬಹುಶಃ ಕೌಟುಂಬಿಕ ಕಲಹಗಳು, ತಮ್ಮೊಡನೆ ಇದ್ದ ನಾಯಕರ ಗೊಂದಲಗಳು ಅವರನ್ನು ಜರ್ಜರಿತಗೊಳಿಸಿದ್ದೂ ಇರಬಹುದು. ಈ ಗೊಂದಲದಲ್ಲಿಯೇ ಅವರು ಮುಸಲ್ಮಾನರ ಓಲೈಕೆಗೆ ಕೆಲಸ ಶುರುಮಾಡಿದರು. ಹಾಗೆಂದೇ ಇಡೀ ದೇಶ ಬೆಂಬಲಿಸುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ನಿಂತರು. ಅವರಿಗೆ ಶತಾಯ-ಗತಾಯ ಮುಸಲ್ಮಾನರ ಮತಗಳು ಬೇಕಿದ್ದವು. ಹೀಗಾಗಿಯೇ ಭಯೋತ್ಪಾದಕನನ್ನೂ ಸಜ್ಜನ ಎಂದು ಹೇಳುವ ಆ ಮೂಲಕ ಮುಸಲ್ಮಾನರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಧಾವಂತಕ್ಕೆ ಬಿದ್ದರು. ಸಿದ್ದರಾಮಯ್ಯ ಇದೇ ಕೆಲಸವನ್ನು ಮಾಡಿ ಅವರ ಮತಗಳನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಉದಾಹರಣೆ ಎದುರಿಗಿತ್ತು. ಆದರೆ ಸಿದ್ದರಾಮಯ್ಯ ಈ ಕೆಲಸ ಮಾಡುವಾಗ ಇದ್ದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ಕುಮಾರಸ್ವಾಮಿ ಅರಿಯುವುದರಲ್ಲಿ ಸೋತರು ಅಷ್ಟೇ. ಜನಸಭೆಗಳಲ್ಲಿ ಕಾಣುತ್ತಿದ್ದ ದೊಡ್ಡ ಸಂಖ್ಯೆಯ ಮುಸಲ್ಮಾನರೇ ಅವರ ಮನಸ್ಸನ್ನು ಅಪಹರಿಸಿಬಿಟ್ಟಿದ್ದರು. ಆದರೆ ದೇಶದಾದ್ಯಂತ ಸುಮಾರು 18-20ರಷ್ಟಿರುವ ಮುಸಲ್ಮಾನರಲ್ಲಿ 3 ರಿಂದ 4 ಪ್ರತಿಶತದಷ್ಟೂ ಬೀದಿಗೆ ಬಂದಿರಲಿಲ್ಲವೆಂಬುದು ಅವರು ಅರ್ಥವೇ ಮಾಡಿಕೊಂಡಿರಲಿಲ್ಲ. ಮಂಗಳೂರಿನಲ್ಲಿ ಬಾಂಬಿಟ್ಟು ಹೋದವ ಮುಸಲ್ಮಾನನಲ್ಲ ಎಂಬುದು ಅವರ ಆನಂದವನ್ನು ನೂರ್ಮಡಿಗೊಳಿಸಿತ್ತು. ಆದರೆ ಅದಕ್ಕೂ ಮುನ್ನವೇ ಅವರು ಮಿಣಿಮಿಣಿ ಪೌಡರ್​ನ ಮಾತುಗಳನ್ನು ಪತ್ರಕರ್ತರ ಮುಂದೆ ಆಡಿ ಟೀಕಾಕಾರರಿಗೆ ದೊಡ್ಡ ಬಾಗಿಲನ್ನೇ ತೆರೆದುಬಿಟ್ಟಿದ್ದರು. ಹಾಗಂತ ಟೀಕೆಗಳು ಅಸಹಜವೇನೂ ಆಗಿರಲಿಲ್ಲ. ಈ ಹಿಂದೆಯೂ ಅವರು ಮಂಗಳೂರು ಗಲಭೆಯಲ್ಲಿ ಪೊಲೀಸರದ್ದೇ ತಪ್ಪೆನ್ನುವ ಸೀಡಿಯೊಂದನ್ನು ಧಾವಂತಕ್ಕೆ ಬಿದ್ದು ಬಿಡುಗಡೆಗೊಳಿಸಿ ಅಪಹಾಸ್ಯಕ್ಕೊಳಗಾಗಿದ್ದರು. ಸ್ವತಃ ಮುಸಲ್ಮಾನರ ದೊಡ್ಡ ಪಂಗಡವೇ ವಹಾಬಿ ಮುಸಲ್ಮಾನರ ವಿಧ್ವಂಸಕ ಕೃತ್ಯಗಳನ್ನು ವಿರೋಧಿಸುತ್ತಿರುವಾಗ ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತು ನಗೆಪಾಟಲಿಗೀಡಾದರು. ಸಾಮಾಜಿಕ ಜಾಲತಾಣಗಳು ಸುಮ್ಮನಿರುತ್ತೇನು? ನೀವು ಮಾಜಿ ಮುಖ್ಯಮಂತ್ರಿಯಾಗಿರಿ ಮಾಜಿ ಪ್ರಧಾನಿಯೇ ಆಗಿರಿ, ತನಗನಿಸಿದ್ದನ್ನು ಅದರಲ್ಲಿ ಬರೆಯುವುದನ್ನು ಯಾರೂ ತಡೆಯಲಾಗುವುದಿಲ್ಲ. ಸೀಡಿ ಪ್ರಕರಣವನ್ನು ಎಳೆದೆಳೆದು ಚೆಂಡಾಡಿದ ನೆಟ್ಟಿಗರಿಗೆ ಮಿಣಿಮಿಣಿ ಪೌಡರ್ ಮಹಾ ಅಸ್ತ್ರವಾಗಿಯೇ ದೊರೆಯಿತು. ಬಹುಶಃ ‘ನಿಖಿಲ್ ಎಲ್ಲಿದ್ಯಪ್ಪಾ’ ನಂತರ ಅತೀ ಹೆಚ್ಚು ಟ್ರೋಲಿಗೊಳಗಾದ ಸಂಗತಿಯೇ ಇದು. ಫೇಸ್​ಬುಕ್, ವಾಟ್ಸಪ್, ಟಿಕ್​ಟಾಕ್​ಗಳಲ್ಲದೆ ಈಗಲೂ ನಾಲ್ಕು ಜನ ಸೇರಿದರೆಂದರೆ ಅಲ್ಲೊಂದು ಮಿಣಿಮಿಣಿ ಪೌಡರ್ ಸುದ್ದಿ ಬರದೇ ಇರುವುದು ಸಾಧ್ಯವೇ ಇಲ್ಲ. ಇದಕ್ಕೆ ಮುತ್ಸದ್ದಿಯಂತೆ ಪ್ರತಿಕ್ರಿಯಿಸುವುದನ್ನು ಬಿಟ್ಟು ಕುಮಾರಸ್ವಾಮಿ ‘ಈ ಟ್ರೋಲಿನಲ್ಲಿ ಬಿಜೆಪಿಯವರದ್ದೇ ಕೈವಾಡ’ ಎಂದರು. ಆ ಮೂಲಕ ಈ ವಿಚಾರದಲ್ಲಿ ಟ್ರೋಲ್ ಮಾಡುವ ರಾಜ್ಯದ ಬಹುಪಾಲು ಜನರನ್ನು ಬಿಜೆಪಿಯವರನ್ನಾಗಿಸಿಬಿಟ್ಟರು. ಸಿಡಿಯ ಮೂಲಕ ಪೊಲೀಸರ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವಾಗ ಮತ್ತು ಮಿಣಿಮಿಣಿ

    ಪೌಡರ್​ನ ವಿರುದ್ಧ ಹೇಳಿಕೆ ಕೊಡುವಾಗ ಕುಮಾರಸ್ವಾಮಿ ಮುಖಭಾವವನ್ನು ಗಮನಿಸಿದರೆ ಅವರೊಳಗೆ ಉರಿಯುತ್ತಿದ್ದ ಬೆಂಕಿ ಎಂಥದ್ದೆಂದು ಎಂಥವನಿಗೂ ಅರ್ಥವಾದೀತು. ಪ್ರಕರಣವನ್ನು ಇಲ್ಲಿಗೇ ಮುಗಿಸದೆ ಜೆಡಿಎಸ್​ನ ರಾಜ್ಯಾಧ್ಯಕ್ಷರು ‘ಮಿಣಿಮಿಣಿ ಪೌಡರ್ ಎನ್ನುವವರ ವಿರುದ್ಧ ಕೇಸು ಹಾಕುತ್ತೇವೆ’ ಎಂದಿದ್ದಂತೂ ವಿಚಿತ್ರವಾಗಿತ್ತು. ಅಂದಿನಿಂದ ಇಂದಿನವರೆಗಿನ ರಾಜ್ಯದ ಎಲ್ಲ ಫೇಸ್​ಬುಕ್ ಪೊ›ಫೈಲುಗಳನ್ನು ತೆಗೆದು ನೋಡಿದರೆ ಬಹುಶಃ 80 ಪ್ರತಿಶತದಷ್ಟಾದರೂ ಜನರ ಮೇಲೆ ಕೇಸು ಹಾಕಲು ಸಾಧ್ಯವೇ ಎಂದೂ ಯೋಚಿಸಲಿಲ್ಲ. ಅವರು ಮತ್ತೆ ‘ಬಿಜೆಪಿಯವರು ಇಂತಹ ಪ್ರಯತ್ನ ಮುಂದುವರಿಸಿದರೆ ಅವರ ಅನುಚಿತ ವರ್ತನೆಯನ್ನು ಬಯಲಿಗೆಳೆಯುತ್ತೇವೆ’ ಎಂದು ಹೇಳಿದ್ದು ಕುಮಾರಸ್ವಾಮಿಯವರ ಈ ವರ್ತನೆ ಅನುಚಿತವಾಗಿದ್ದು ಎಂದು ಒಪ್ಪಿಕೊಂಡಂತಾಗಿತ್ತು ಅಷ್ಟೇ!

    ಟೀಕೆಗಳು ಸಾರ್ವಜನಿಕ ಬದುಕಿನಲ್ಲಿ ಸಾಮಾನ್ಯ. ಅದನ್ನು ಎದುರಿಸುವ ಧೈರ್ಯವಿಟ್ಟುಕೊಂಡೇ ಆ ಬದುಕನ್ನು ಸ್ವೀಕರಿಸಿರೋದಲ್ಲಾ! ಒಂದು ಕ್ಷಣ ಮೈಮರೆತರೂ ನಾಯಕನೊಬ್ಬ ಕಾರ್ಯಕರ್ತನಿಗಿಂತಲೂ ಸಾಮಾನ್ಯನಾಗಿಬಿಡುತ್ತಾನೆ. ಹೀಗಾಗಿಯೇ ಎಚ್ಚರಿಕೆಯಿಂದಲೇ ಮಾತನ್ನಾಡಬೇಕು. ಆನಂತರ ಬಲು ಎಚ್ಚರಿಕೆಯಿಂದಲೇ ಪ್ರತಿಕ್ರಿಯಿಸಬೇಕು. ಜೊತೆಗೆ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡ ಟೀಕಾಪ್ರಹಾರಗಳ ಆಯಸ್ಸೂ ಕಡಿಮೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಟೀಕೆಯನ್ನು ಉಡಾಫೆಯಿಂದಲೇ ಗೆಲ್ಲುವ ಮತ್ತು ತನಗೆ ಬಲವಾಗುವಂತೆ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಸಿದ್ದರಾಮಯ್ಯನವರಿಂದ ಕಲಿಯಬೇಕು. ‘ಹೌದು ಹುಲಿಯಾ’ ಎಂಬುದು ವಿರುದ್ಧವಾಗಬಹುದಾದ ಎಲ್ಲ ಸಾಧ್ಯತೆ ಇದ್ದಾಗಲೂ ಅದನ್ನು ತನ್ನ ಪರವಾಗಿ ತಿರುಗಿಸಿಕೊಂಡಿದ್ದಲ್ಲದೆ ತನ್ನ ಕಿರೀಟಕ್ಕೆ ಗೌರವದ ಗರಿಯಾಗಿ ಮಾರ್ಪಡಿಸಿಕೊಂಡುಬಿಟ್ಟರು!

    ಏನೇ ಹೇಳಿ, ನಾವಿರುವ ಈ ದಶಕದಲ್ಲಿ ಯಾವುದೂ ಸುಲಭವಲ್ಲ. ಮನಸ್ಸಿನ ಮೇಲೆ ಹಿಡಿತವಿದ್ದರೆ ಯಾವುದು ಅಸಾಧ್ಯವೂ ಅಲ್ಲ. ನಾಯಕರೆನಿಸಿಕೊಂಡವರು ಕಲಿಯಬೇಕಾದ ಮೊದಲ ಪಾಠ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts