ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಟೆಂಡರ್ಗೆ ಸಂಬಂಧಿಸಿದ ಲಂಚದ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದು ಸ್ಮಾರ್ಟ್ ಟ್ರ್ಯಾಪ್ನಲ್ಲಿ. ಅರ್ಥಾತ್, ಅವರ ವಿರುದ್ಧ ದೂರುದಾರರು ತಮ್ಮ ಸ್ಮಾರ್ಟ್ವಾಚ್ನಲ್ಲೇ ಬಲೆ ಹೆಣೆದಿದ್ದರು.
ತಾವು ಯಾವ ರೀತಿ ದಾಖಲೆ ಸೃಷ್ಟಿಸಿಕೊಂಡಿದ್ದು ಎಂಬುದರ ಜತೆಗೆ ಅವುಗಳನ್ನು ಯಾವ ರೀತಿ ನೀಡಲಾಗಿದೆ ಎಂಬ ಕುರಿತು ದೂರುದಾರ ಶ್ರೇಯಸ್ ಕಶ್ಯಪ್ ಲೋಕಾಯುಕ್ತಕ್ಕೆ ತಿಳಿಸಿರುವ ಸಂಗತಿ ವಿವರವಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ. ದೂರುದಾರ ಶ್ರೇಯಸ್ ಕಶ್ಯಪ್ ಲೋಕಾಯುಕ್ತಕ್ಕೆ ದೂರು ನೀಡುವ ವೇಳೆ ತಮ್ಮ ಸ್ಮಾಟ್ ವಾಚ್ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಸಂಭಾಷಣೆಯ ಡಿವಿಡಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಗಂಡ ಶಾಪಿಂಗ್ಗೆ ಹಣ ಕೊಟ್ಟಿಲ್ಲ ಅಂತ ಲವರ್ನ ಕರೆಸಿ ಹೊಡೆಸಿದ ಹೆಂಡತಿ!
ಪ್ರಶಾಂತ್ ಮಾಡಾಳ್ ಲಂಚದ ಕುರಿತು ದೂರುದಾರ ಶ್ರೇಯಸ್ ಅವರೊಂದಿಗೆ ಮಾತನಾಡುವಾಗ ಅದನ್ನು ತಮ್ಮ ಬಳಿ ಇದ್ದ ಖಾಸಗಿ ಕಂಪನಿಯ ಸ್ಮಾರ್ಟ್ವಾಚ್ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಆ ವಿಡಿಯೋವನ್ನು ತಮ್ಮ ಲ್ಯಾಪ್ಟಾಪ್ ಸಹಾಯದಿಂದ ಒಂದು ಡಿವಿಡಿಗೆ ವರ್ಗಾಯಿಸಿ. ಆ ಡಿವಿಡಿ ಜತೆಗೆ ಅವರು ಬೇಡಿಕೆ ಇಟ್ಟಿದ್ದ ಲಂಚದ ಹಣದ ಸಂಬಂಧ 40 ಲಕ್ಷ ರೂ. ಶ್ರೀವಾರು ಎಕ್ಸ್ಕ್ಲೂಸಿವ್ಸ್ ಎಂಬ ಹೆಸರು ನಮೂದಿಸಿ ಬಿಳಿ ಬಣ್ಣದ ಹೂ ಚಿತ್ರವುಳ್ಳ ಬ್ಯಾಗ್ನಲ್ಲಿ ಹಾಕಿ, ನಂತರ ಅದನ್ನು ನೀಲಿ ಬಣ್ಣದ ಸ್ಟ್ರಾಬೆರಿ ಹಣ್ಣುಗಳ ಚಿತ್ರವಿರುವ ಬ್ಯಾಗ್ನಲ್ಲಿ ಇರಿಸಿ ದೂರಿನೊಂದಿಗೆ ಲಗತ್ತಿಸಿದ್ದರು. ಅಲ್ಲದೆ ದೂರಿನಲ್ಲಿ ಉಲ್ಲೇಖಿಸಿರುವ ಕಂಪನಿಗಳಿಗೆ ಟೆಂಡರ್ ಮಂಜೂರಾಗಿರುವ ಮತ್ತು ಖರೀದಿ ಆದೇಶ ಮಾಡಿರುವ ಕುರಿತು ಮಾಡಾಳ್ ಜತೆಗೆ ನಡೆಸಿದ್ದ ವಾಟ್ಸ್ಆ್ಯಪ್ ಚಾಟ್ಗಳ ದಾಖಲಾತಿಗಳನ್ನು ದೂರಿನೊಂದಿಗೆ ಲೋಕಾಯುಕ್ತಕ್ಕೆ ನೀಡಿದ್ದಾರೆ. ಜತೆಗೆ ದೂರನ್ನು ವಕೀಲರಿಂದ ಟೈಪ್ ಮಾಡಿಸಿ ತಂದು ನೀಡಿರುವುದು ಬೆಳಕಿಗೆ ಬಂದಿದೆ.