ಮುಂಬೈ: ವಾಣಿಜ್ಯ ನಗರಿ ಮುಂಬೈನ ಜೀವನಾಡಿ ಎಂದೇ ಕರೆಯಲ್ಪಡುವ ಲೋಕಲ್ ರೈಲಿನಲ್ಲಿ ಪ್ರತಿನಿತ್ಯ ಸಾವಿರಾರು ಜನ ಒಂದು ನಗರದಿಂದ ಮತ್ತೊಂದೆಡೆ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ರೈಲಿನಲ್ಲಿ ನಡೆಯುವ ಘಟನೆಗಳು ಜನರ ಗಮನವನ್ನು ತಮ್ಮತ್ತ ಸೆಳೆಯುತ್ತಿರುತ್ತವೆ.
ಇದೀಗ ಘಟನೆಯೊಂದರಲ್ಲಿ ವ್ಯಕ್ತಿಗಳಿಬ್ಬರು ಜನನಿಬಿಡ ರೈಲಿನಲ್ಲಿ ಬಡಿದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಆ ಮೂರನೇ ವ್ಯಕ್ತಿ ಮಾಡಿದ ಕೆಲಸದ ದೃಶ್ಯ ನೆಟ್ಟಿಗರ ಗಮನವನ್ನು ಹೆಚ್ಚು ಸೆಳೆಯುತ್ತಿದೆ.
ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಲ್ಲ ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ: ಸ್ವಾಮಿ ಪ್ರಸಾದ್ ಮೌರ್ಯ
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಒಬ್ಬರನ್ನೊಬ್ಬರು ನಿಂದಿಸುತ್ತಾ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಇದಾದ ಕೆಲ ಕ್ಷಣಗಳ ಬಳಿಕ ಇಬ್ಬರ ನಡುವಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾರೆ. ನಂತರ ಆತ ಇಬ್ಬರಿಗೂ ಬುದ್ದಿವಾದ ಹೇಳಿ ಸುಮ್ಮನಿರುವಂತೆ ಸೂಚಿಸುತ್ತಾನೆ.
ಇಬ್ಬರ ನಡುವಿನ ಜಗಳವನ್ನು ಬಿಡಿಸಿದ ವ್ಯಕ್ತಿ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಆತನ ಕಾರ್ಯ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ. ಬೇರೆಯವರು ಹೊಡೆದಾಟವನ್ನು ವಿಡಿಯೋ ಮಾಡುತ್ತಿದ್ದಾರೆ ಈತ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇಬ್ಬರ ನಡುವಿನ ಗಲಾಟೆಯನ್ನು ಬಿಡಿಸಿ ಒಳ್ಳೆಯ ಕೆಲಸ ಮಾಡಿದ್ದಾನೆ. ವಿಡಿಯೋದಲ್ಲಿ ವೈರಲ್ ಆಗಿರುವುದು ಹೊಡೆದಾಟವಲ್ಲ ಆತನ ಕೆಲಸ ಎಂದು ಹಲವರು ಕಮೆಂಟ್ ಮಾಡಿದ್ದಾರೆ.