ನವದೆಹಲಿ: ಲಡಾಖ್ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ಮಾತುಕತೆ ಜಾರಿಯಲ್ಲಿದೆ. ಸದ್ಯ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಹೇಳಿದ್ದಾರೆ.
ಶನಿವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು ಚೀನಾದೊಂದಿಗಿನ ಉನ್ನತ ಮಟ್ಟದ ನಿಯೋಗದ ಮಾತುಕತೆಯ ಬಳಿಕ ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಕಮಾಂಡರ್ಗಳ ನೇತೃತ್ವದಲ್ಲಿ ಇನ್ನೊಂದು ಹಂತದ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಲಡಾಖ್ ಬಿಕ್ಕಟ್ಟನ್ನು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ತಳಕು ಹಾಕಿದ ಚೀನಾ
ನಿರಂತರವಾಗಿ ನಡೆಯುತ್ತಿರುವ ಮಾತುಕತೆ ಮೂಲಕ ನಮ್ಮೆರಡು ರಾಷ್ಟ್ರಗಳ ನಡುವೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಸದ್ಯದ ಮಟ್ಟಿಗೆ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿದರು.
ಲಡಾಖ್ನ ಪೂರ್ವ ಭಾಗದಲ್ಲಿ ಉಭಯ ರಾಷ್ಟ್ರಗಳ ಮೇಜರ್ ಜನರಲ್ ಮಟ್ಟದ ಮಿಲಿಟರಿ ಅಧಿಕಾರಿಗಳ ನಡುವೆ ಶುಕ್ರವಾರ ನಡೆದ ಸಭೆಯ ಮರುದಿನ ಸೇನಾಪಡೆ ಮುಖ್ಯಸ್ಥರು ಈ ಪ್ರತಿಕ್ರಿಯೆ ನೀಡಿದ್ದಾರೆ. ಮೇ 5-6ರ ರಾತ್ರಿಯಲ್ಲಿ ಪ್ಯಾಂಗಾಂಗ್ ತ್ಸೊ ಬಳಿಯಲ್ಲಿ ಪಹರೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಚೀನಿ ಯೋಧರು ಭಾರತೀಯ ಯೋಧರ ಮೇಲೆ ಮುಳ್ಳುತಂತಿ ಸುತ್ತಿದ್ದ ಬಡಿಗೆಯಿಂದ ಹಲ್ಲೆ ಮಾಡಿದ್ದರು. ಇದು ಲಡಾಖ್ ಬಿಕ್ಕಟ್ಟಿಗೆ ನಾಂದಿ ಹಾಡಿತ್ತು. ಆನಂತರದಲ್ಲಿ ಬಿಕ್ಕಟ್ಟು ಶಮನಕ್ಕೆ ಉಭಯ ರಾಷ್ಟ್ರಗಳ ಮೇಜರ್ ಜನರಲ್ ದರ್ಜೆಯ ಮಿಲಿಟರಿ ಅಧಿಕಾರಿಗಳ ನಡುವೆ ನಡೆದ 5ನೇ ಸುತ್ತಿನ ಮಾತುಕತೆ ಇದಾಗಿತ್ತು.