ಚಿಕ್ಕಮಗಳೂರು: ಯುವಕ-ಯುವತಿಯರ ಗುಂಪು ಮುಳ್ಳಯನಗಿರಿ ಪ್ರವಾಸಕ್ಕೆಂದು ತಮ್ಮ ಬೊಲೆರೋ ವಾಹನದಲ್ಲಿ ಹೊರಟಿದ್ದರು. ಸುಮ್ಮನೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ.. ಆದರೆ ಇವರು ಮಾಡಿದ ಆವಾಂತರದಿಂದಾಗಿ ಕೈಗೊಂಡಿದ್ದ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ. ಅಂದಹಾಗೆ ಕಾನೂನು ನಿಯಮ ಉಲ್ಲಂಘಿಸಿ ಪ್ರಯಾಣ ಮಾಡಿ ಪ್ರವಾಸಕ್ಕೆ ಬಂದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಪ್ರವಾಸದ ಗುಂಗಿನಲ್ಲಿದ್ದ ಇವರಿಗೆ ಚಿಕ್ಕಮಗಳೂರು ಪೊಲೀಸರು ಶಾಕ್ ನೀಡಿದ್ದು, ಅಮಲು ಪದಾರ್ಥ ಸೇವಿಸಿ ಪ್ರಯಾಣಿಸುತ್ತಿದ್ದರ ವಿರುದ್ಧ ಪ್ರಕರಣ ದಾಖಲಿಸಿದ್ದಲ್ಲದೇ ವಿಚಾರಣೆ ಕೈಗೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಬೊಲೆರೋ ವಾಹನದ ಮೇಲೆ ಕುಳಿತು, ಅಮಲಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೊಲೀಸರು ತಡೆದು ವಾಹನ ವಶಕ್ಕೆ ಪಡೆದಿದ್ದಾರೆ.
ಕೆಎ 34M, 6646 ವಾಹನದಲ್ಲಿ ಹೋಗುತ್ತಿದ್ದವರನ್ನು ತಡೆದು ವಾಹನವನ್ನು ಜಪ್ತಿ ಮಾಡಿದ್ದಾರೆ. NDPS ಕಾಯಿದೆಯಡಿಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)