ನವದೆಹಲಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ತಮ್ಮ ಕಚೇರಿಯ ವಿಶೇಷ ಕರ್ತವ್ಯ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.
ಜಿಎಸ್ಟಿಗೆ ಸಂಬಂಧಿಸಿ ಉದ್ಯಮಿಯೊಬ್ಬರಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಶೇಷ ಕರ್ತವ್ಯ ಅಧಿಕಾರಿ ಗೋಪಾಲ್ ಕೃಷ್ಣ ಮಾಧವ್ ಅವರನ್ನು ಗುರುವಾರ ರಾತ್ರಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ತಮ್ಮ ಕಚೇರಿಯ ವಿಶೇಷ ಕರ್ತವ್ಯ ಅಧಿಕಾರಿ ಬಂಧನವನ್ನು ದೃಢಪಡಿಸಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮಾಧವ್ ಅವರು ನನ್ನ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕವಾಗಿದ್ದರು. ಇವರಂತೆ 5 ವರ್ಷಗಳಲ್ಲಿ ಅನೇಕ ಭ್ರಷ್ಟ ಅಧಿಕಾರಿಗಳು ನನ್ನ ಕಚೇರಿಯಲ್ಲಿ ಇದ್ದರು. ಇವರಿಂದ ನಾನು ಹಲವು ಬಾರಿ ಸಮಸ್ಯೆಗೆ ಸಿಕ್ಕಿಕೊಂಡಿದ್ದೇನೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಅಮಿತ್ ಮಾಳವೀಯಾ ಅವರು, ದೆಹಲಿ ಉಪ ಮುಖ್ಯಮಂತ್ರಿ ಅವರಿಗೆ ಮಾಹಿತಿ ಇಲ್ಲದೆ ಅವರ ವಿಶೇಷ ಕರ್ತವ್ಯ ಅಧಿಕಾರಿ ಲಂಚ ಪಡೆಯುತ್ತಿದ್ದರು ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಹಾಗೂ ಅವರ ಪಕ್ಷದ ನಾಯಕರು ಭ್ರಷ್ಟಾಚಾರದ ವಿರುದ್ಧ ಚಳವಳಿ ನಡೆಸಿ ಅಧಿಕಾರಕ್ಕೆ ಬಂದವರು. ಈಗ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
मुझे पता चला है कि सीबीआई ने एक GST इन्स्पेक्टर को रिश्वत लेते हुए गिरफ़्तार किया है. यह अधिकारी मेरे ऑफ़िस में बतौर OSD भी तैनात था. सीबीआई को उसे तुरंत सख़्त से सख़्त सजा दिलानी चाहिए. ऐसे कई भ्रष्टाचारी अधिकारी मैंने ख़ुद पिछले 5 साल में पकड़वाए है.
— Manish Sisodia (@msisodia) February 7, 2020