ಸಿರಗುಪ್ಪ: ರಾರಾವಿ ಹತ್ತಿರ ವೇದಾವತಿ ಹಗರಿ ನದಿಗೆ ನಿರ್ಮಿಸಲಾದ ನೆಲಮಟ್ಟದ ಹಳೇ ಸೇತುವೆ ಬಹುತೇಕ ಹಾಳಾಗಿದ್ದು, ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ದುಸ್ಥಿತಿ ತಲುಪಿದೆ.
ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಕಾಮಗಾರಿ ಮುಗಿಯಲು ಇನ್ನೂ ಮೂರು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ನೆಲಮಟ್ಟದ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದ್ದು, ದುರಸ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.
ಈ ಹಳೇ ಸೇತುವೆ ಸೀಮಾಂಧ್ರ ಪ್ರದೇಶ ಮತ್ತು ತಾಲೂಕಿನ 20 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. 15 ದಿನಗಳಿಂದ ನಿರಂತರ ಸೇತುವೆ ಮೇಲೆ ಮಳೆ ನೀರು ಹರಿದಿದ್ದರಿಂದ ಬಹುತೇಕ ಕಡೆಗಳಲ್ಲಿ ಹಾಳಾಗಿದೆ. ಈಗ ವಾಹನಗಳು ಕುಡುದರಹಾಳು ಸೇತುವೆ ಮೇಲೆ ಸಂಚರಿಸುತ್ತಿವೆ. ರಾರಾವಿ ಸೇತುವೆ ಮೇಲೆ ನೀರು ಕಡಿಮೆಯಾದರೆ ಮತ್ತೇ ಈ ಸೇತುವೆ ಮೇಲೆ ಸಂಚರಿಸಬಹುದೆಂದು ಸಾರ್ವಜನಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈಗ ಈ ಸೇತುವೆ ಮೇಲೆ ಸೈಕಲ್ ಓಡಿಸಲೂ ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ.