ಸಿರಗುಪ್ಪ: ವಿವಿಧ ರಂಗಗಳಲ್ಲಿ ಮಹಿಳೆಯರು ವೃತ್ತಿ ನಿರತವಾಗಿದ್ದು, ಲಿಂಗತಾರತಮ್ಯ, ಅಸಹಾಯಕತೆ, ಅಸಹಕಾರದ ಕೊರತೆಯಿಂದಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎನ್.ಲೋಕೇಶ್ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಕೃಷ್ಣದೇವರಾಯ ಪ್ರೌಢಶಾಲೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದಾ ಮಾತನಾಡಿ, ಕೆಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದು, ಅನೇಕ ಮಹಿಳೆಯರು ತಾರತಮ್ಯದಿಂದಾಗಿ ಇನ್ನೂ ಹಿಂದುಳಿದಿದ್ದಾರೆ. ಅವರೂ ಮುಖವಾಹಿನಿಗೆ ಬರಬೇಕು ಎಂದರು.
ಬಿಇಒ ಪಿ.ಡಿ.ಭಜಂತ್ರಿ, ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥಗೌಡ, ಸಂಸ್ಥೆಯ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ರಮಾದೇವಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯರಂಗರೆಡ್ಡಿ, ವಕೀಲರಾದ ಅಬ್ದುಲ್ಸಾಬ್, ವೆಂಕಟೇಶ ನಾಯ್ಕ, ಮಹೇಶ, ಮಲ್ಲಿಗೌಡ, ಮಂಜುಳ, ಅಶ್ವಿನಿ ಇತರರು ಇದ್ದರು.