ಸಿರಿಗೇರಿ: ಸಮೀಪ ಇರುವ ರುದ್ರಪಾದ, ಮಣ್ಣೂರು, ಸೂಗುರು ಸೇರಿ ವಿವಿಧ ಹಳ್ಳಿಗಳಲ್ಲಿನ 100ಕ್ಕೂ ಅಧಿಕ ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ತುಂಗಭದ್ರಾ ನದಿ ನೀರಿನಿಂದ ಆವೃತವಾಗಿದೆ. ಭಾನುವಾರ 1.50 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಕಲೆ ರೈತರ ಪಂಪ್ಸೆಟ್ಗಳಿಗೂ ಧಕ್ಕೆಯಾಗಿದ್ದು, ಒಬ್ಬ ಕೃಷಿಕರ ಪಂಪ್ಸೆಟ್ ಇರಿಸಿದ ಕೊಠಡಿ ಸಂಪೂರ್ಣ ಮುಳಗಿದೆ.
ಹೊಸಪೇಟೆಯಲ್ಲಿ ಸುರಿದ ಮಳೆ
ಕೆಲ ದಿನಗಳಿಂದ ಬಹುತೇಕ ಮೋಡ ಕವಿದ ವಾತಾವರಣವಿದ್ದರೂ ತುಂತುರು ಮಳೆಗೆ ಸೀಮಿತವಾಗಿದ್ದ ವರುಣ ದೇವ ಸೋಮವಾರ ಸಂಜೆ ಅಬ್ಬರಿಸಿದ್ದಾನೆ. ನಗರ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ವಿವಿಧ ತಾಲೂಕುಗಳಲ್ಲಿ ಬಿರುಸಿನ ಮಳೆಯಾಗಿದೆ. ಮಳೆಯಿಂದಾಗಿ ಶಾಲಾ ಮಕ್ಕಳು, ಸರ್ಕಾರಿ, ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಮನೆಗೆ ಮರಳಲು ಪರದಾಡಿದರೆ, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.