ಸಿರಿಗೇರಿ: ನರೇಗಾದಲ್ಲಿ ನಿರಂತರ ಕೆಲಸ ಕೊಡಬೇಕೆಂದು ಕಾರ್ಮಿಕರು ಇಲ್ಲಿನ ಗ್ರಾಪಂ ಎದುರು ಶುಕ್ರವಾರ ಧರಣಿ ನಡೆಸಿದರು. ಏಪ್ರಿಲ್ನಲ್ಲಿ ಬಿಟ್ಟರೆ ಉಳಿದ ದಿನಗಳಲ್ಲಿ ನಮಗೆ ಎನ್ಎಂಆರ್ ಹಾಕಿಲ್ಲ. ಈ ಬಿರುಬಿಸಿಲಿನಲ್ಲಿ ಯಾವುದೇ ಕಾಯಂ ಉದ್ಯೋಗವೂ ಇಲ್ಲ. ಎತ್ತ ತಿರುಗಿದರೂ ಕೆಲಸವೂ ಇಲ್ಲ. ಇಂತಹ ಸಮಯದಲ್ಲಿ ಬಡವರು ಗುಳೆ ಹೋಗಬೇಕಾಗುತ್ತದೆ. ಮಳೆ ಬಂದರೆ ಮಾತ್ರ ನಮ್ಮ ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ ಎಂದು ಗೋಗೆರೆದರು. ಪಿಡಿಒ ಶಿವುಕುಮಾರ್ ಕೋರಿ ಮಾತನಾಡಿ, 2500ಕ್ಕೂ ಹೆಚ್ಚು ಕಾರ್ಮಿಕರು ಅರ್ಜಿ ಸಲ್ಲಿಸಿದ್ದು, ನಮ್ಮ ಟಾರ್ಗೆಟ್ ತಲುಪಿದ್ದೇವೆ. ಈ ತನಕ 17342 ಮಾನವ ದಿನಗಳು ನಡೆದಿವೆ. ಒಂದೇ ಸ್ಥಳದಲ್ಲಿ ಕೆಲಸ ಮುಂದುವರಿಸಲು ಆಗುವುದಿಲ್ಲ. ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಬೇಕಗುತ್ತದೆ ಎಂದರು. ಕೊನೆಗೆ ಧರಣಿ ನಿರತ ಕಾರ್ಮಿಕರ ಒತ್ತಾಯಕ್ಕೆ ಎರಡನೇ ಅವಧಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದರು.