ಸಿರಗುಪ್ಪ: ತಾಳೂರು ಗ್ರಾಮದ ಹತ್ತಿರದ ವೇದಾವತಿ ಹಗರಿ ನದಿಯಲ್ಲಿ ಭಾನುವಾರ ಬೆಳಗಿನ ಜಾವ ಮೊಸಳೆ ಪ್ರತ್ಯಕ್ಷವಾಗಿದ್ದು, ಈ ಭಾಗದ ಜನರಲ್ಲಿ ಆತಂಕ ಉಂಟುಮಾಡಿದೆ.
ತುಂಗಭದ್ರಾ ನದಿಯಲ್ಲಿ ಎರಡ್ಮೂರು ವರ್ಷಗಳಿಂದ ಮೊಸಳೆಗಳು ಜನ ಜಾನುವಾರುಗಳ ಮೇಲೆ ದಾಳಿ ಮಾಡಿವೆ. ಆದರೆ, ಹಗರಿಯಲ್ಲೂ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಮತ್ತಷ್ಟು ಭಯ ಉಂಟು ಮಾಡಿದ್ದು, ನೀರಿಗೆ ಇಳಿಯಲು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಹಗಲು, ರಾತ್ರಿ ಎನ್ನದೆ ನದಿ ಮತ್ತು ಹಗರಿಗಳ ದಂಡೆಯಲ್ಲಿ ಅಳವಡಿಸಿರುವ ನೀರಿನ ಪಂಪ್ಸೆಟ್ಗಳನ್ನು ಚೆಕ್ ಮಾಡಲು ಆಗಾಗ ನದಿಗೆ ಇಳಿಯುವುದು ಅನಿವಾರ್ಯ. ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಮೊಸಳೆಗಳನ್ನು ಸೆರೆಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ಬಿಟ್ಟರೆ ಅನುಕೂಲವಾಗುತ್ತದೆ ಎಂದು ರೈತರು ಒತ್ತಾಯಿಸಿದ್ದಾರೆ. ತಾಲೂಕಿನ ವೇದಾವತಿ ಹಗರಿಯಲ್ಲಿ ಮೊಸಳೆ ಇರುವ ಬಗ್ಗೆ ಯಾರಿಂದಲೂ ಮಾಹಿತಿ ಬಂದಿಲ್ಲ ಎಂದು ಸಾಮಾಜಿಕ ಅರಣ್ಯ ವಲಯಾಧಿಕಾರಿ ಗಿರೀಶ ತಿಳಿಸಿದ್ದಾರೆ.