ಸಿರಗುಪ್ಪ: ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಅನೇಕ ಸೌಲಭ್ಯ ನೀಡುತ್ತಿದ್ದು, ಸೌಕರ್ಯ ಪಡೆದು ವಿದ್ಯಾಭ್ಯಾಸದ ಕಡೆ ಗಮನಕೊಟ್ಟು ಅತಿ ಹೆಚ್ಚು ಅಂಕ ಪಡೆದು ಪಾಲಕರು ಹಾಗೂ ತಾಲೂಕಿಗೆ ಕೀರ್ತಿ ತರಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ 2020-21ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳ ಮಟ್ಟದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಶನಿವಾರ ಲ್ಯಾಪ್ಟ್ಯಾಪ್ ವಿತರಿಸಿ ಮಾತನಾಡಿದರು. ಸ್ಮಾರ್ಟ್ಫೋನ್ಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ. ಫೋನ್ಗಳಿಂದ ಬಹಳಷ್ಟು ಜ್ಞಾನ ಪಡೆಯಲು ಅವಕಾಶವಿದ್ದರೂ ಇಂದು ದುರ್ಬಳಕೆಯೇ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಕರು ಹೇಳುವ ಪಾಠಗಳ ಕಡೆ ಮಾತ್ರ ಗಮನ ನೀಡಿ ಅವರ ಮಾರ್ಗದರ್ಶನದಲ್ಲಿ ಓದಿದರೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಬಿಇಒ ಪಿ.ಡಿ.ಭಜಂತ್ರಿ, ಬಿಆರ್ಪಿ ಯೋಗಾನಂದಯ್ಯ, ಮುಖ್ಯಶಿಕ್ಷಕ ವೆಂಕಟೇಶ ಯಾದವ್, ಪ್ರಥಮ ದರ್ಜೆ ಸಹಾಯಕ ಪ್ರಹ್ಲಾದ, ಮುಖಂಡರಾದ ಆರ್.ಸಿ.ಪಂಪನಗೌಡ, ಎಂ.ವೀರೇಶ, ಮಹಾದೇವ, ಶಿವಗಣೇಶ ಹಾಗೂ ವಿದ್ಯಾರ್ಥಿಗಳು ಇದ್ದರು.