ಬ್ಯಾಕೋಡು: ತಾಂತ್ರಿಕ ದೋಷದಿಂದಾಗಿ ಶರಾವತಿ ಹಿನ್ನೀರಿನ ಹೊಳೆಬಾಗಿಲು ಲಾಂಚ್ಗಳು ಭಾನುವಾರ ಏಕಾಏಕಿ ಸ್ಥಗಿತಗೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದರು.
ಈ ಮಾರ್ಗದಲ್ಲಿ ಒಟ್ಟು ಮೂರು ಲಾಂಚ್ಗಳಿದ್ದು, ಇದರಲ್ಲಿ ಎರಡು ಲಾಂಚ್ಗಳು ಭಾನುವಾರ ಕೆಟ್ಟು ನಿಂತಿವೆ. ಕಳೆದ ಒಂದು ವಾರದಿಂದಲೂ ಲಾಂಚ್ಗಳಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿದ್ದರೂ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ, ಇದರಿಂದಾಗಿಯೇ ಲಾಂಚ್ಗಳು ಕೆಟ್ಟು ನಿಂತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಭಾನುವಾರ ಹಾಗೂ ಬೇಸಿಗೆ ರಜಾ ಇರುವ ಕಾರಣ ಸಿಂಗದೂರು ಚೌಡೇಶ್ವರಿ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗೆ ಏಕಾಏಕಿ 2 ಲಾಂಚ್ಗಳು ಸ್ಥಗಿತಗೊಂಡ ಕಾರಣ ಸಾಕಷ್ಟು ತೊಂದರೆ ಉಂಟಾಯಿತು.
ಹೀಗೆ ಪದೇಪದೆ ತಾಂತ್ರಿಕ ಕಾರಣದಿಂದ ಲಾಂಚ್ಗಳು ಸ್ಥಗಿತಗೊಳ್ಳುತ್ತಿದ್ದು, ದಿನನಿತ್ಯದ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕರೂರು ಬಾರಂಗಿ ಹೋಬಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.