ಸಾಗರ: ಸಿಗಂದೂರು ಕ್ಷೇತ್ರಕ್ಕೆ ದೇಶದ ವಿವಿಧ ಮೂಲೆಗಳಿಂದ ಜನರು ಆಗಮಿಸುತ್ತಾರೆ. ಅವರಿಗೆ ಲಾಂಚ್ನಲ್ಲಿಯೇ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿಶಿಷ್ಟವಾಗಿ ನಡೆಸಿದ್ದೇವೆ ಎಂದು ಸಾಗರ ತಾಪಂ ಇಒ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಎ.ಎಸ್.ಸುನೀತಾ ಹೇಳಿದರು.
ಅಂಬಾರಗೋಡ್ಲುನಲ್ಲಿ ಶರಾವತಿ ಹಿನ್ನೀರಿನ ಲಾಂಚ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿ. ಯಾವುದೇ ಆಮಿಷಗಳಿಗೆ ಒಳಗಾಗದೆ ಚಲಾಯಿಸಬೇಕು. ಸಾಗರ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಹಾಗಾಗಿ ಲಾಂಚ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಜಾಗೃತಿ ಕಾರ್ಯಕ್ರಮದ ಸಂಯೋಜಕ ವಿ.ಟಿ.ಸ್ವಾಮಿ ಮಾತನಾಡಿ, ಹಾಡು, ಕವಿತೆ ವಾಚನ ಮೂಲಕ ಮತದಾರ ಜಾಗೃತಿ ಮೂಡಿಸುತ್ತಿದ್ದೇವೆ. ಹಿನ್ನೀರಿನ ಈ ಸುಂದರ ಪ್ರದೇಶದಲ್ಲಿ ಪ್ರಯಾಣಿಕರೊಂದಿಗೆ ಸಾಗುತ್ತ ವಿಶಿಷ್ಟ ಕಾರ್ಯಕ್ರಮ ನಡೆಸಿದ್ದೇವೆ ಎಂದು ಹೇಳಿದರು.
ಪೂರ್ಣಿಮಾ, ಸುಭಾಷ್, ಪರಮೇಶ್ವರ್, ನಿತ್ಯಾನಂದ್, ಗಂಗಾಧರ, ಮಾನ್ವಿ ಕರೂರು, ಲಾಂಚ್ ಸಿಬ್ಬಂದಿ, ಗ್ರಾಪಂ, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.