ಸಿಂಧನೂರು: ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆರಂಭಕ್ಕೆ ಆಗ್ರಹಿಸಿ ತಾಲೂಕು ನ್ಯಾಯವಾದಿಗಳ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ಸಿಂಧನೂರು, ಮಸ್ಕಿ ಮತ್ತು ಲಿಂಗಸುಗೂರು ಮೂರು ತಾಲೂಕು ಒಳಗೊಂಡು 3ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಪ್ರಾರಂಭಿಸಲು ಹೈಕೋರ್ಟ್ ಅನುಮತಿ ನೀಡಿದ್ದು, ಈ ಕಡತವನ್ನು ರಾಜ್ಯ ಸರ್ಕಾರದ ಅನುಮೋದನೆಗಾಗಿ 2022 ಮಾ.21ಕ್ಕೆ ಕಳುಹಿಸಿಕೊಡಲಾಗಿದೆ. ಸದರಿ ಕಡತವು ಹಣಕಾಸು ಇಲಾಖೆ ವಿಧಾನಸೌಧದಲ್ಲಿದೆ. ಕಕ್ಷಿದಾರರು, ಸಾರ್ವಜನಿಕರು ಹಾಗೂ ವಕೀಲರ ಅನುಕೂಲಕ್ಕಾಗಿ ಶೀಘ್ರವೇ ಸರ್ಕಾರದ ಹಣಕಾಸಿನ ಅನುಮೋದನೆ ಕೊಡಿಸಿ, ಸಿಂಧನೂರಿನಲ್ಲಿ 3ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಕಾರ್ಯಾರಂಭಕ್ಕೆ ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೀಮನಗೌಡ ಕೊಳಬಾಳ, ಸುರೇಶ ಚನ್ನಳ್ಳಿ, ವೀರೇಶ ಚಿಂಚರಕಿ, ಜಡಿಯಪ್ಪ ವಕೀಲ, ವೀರೇಶ ಗದ್ರಟಗಿ ಇತರರಿದ್ದರು.