ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಶೀಘ್ರ ಐಸಿಸಿ ಸಭೆ ಕರೆಯಬೇಕೆಂದು ರೌಡಕುಂದ ಜಿಪಂ ಸದಸ್ಯ ಬಸವರಾಜ ಹಿರೇಗೌಡ್ರ ಅಧಿಕಾರಿಗಳು, ಶಾಸಕರನ್ನು ಒತ್ತಾಯಿಸಿದರು.
ಈಗಾಗಲೇ ಮುಂಗಾರು ಹಂಗಾಮಿನ ಭತ್ತ ಕಟಾವಿಗೆ ಬಂದಿದೆ. ಬೇಸಿಗೆ ಬೆಳೆಯಾದ ಭತ್ತ ನಾಟಿ ಮಾಡಲು ರೈತರು ಸಸಿ ಮಡಿ ಹಾಕಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಇದೂವರೆಗೆ ಎರಡನೆಯ ಬೆಳೆಗೆ ನೀರು ಬಿಡುವ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನವೆಂಬರ್ ಮೊದಲ ವಾರ ತುಂಗಭದ್ರಾ ಐಸಿಸಿ ಸಭೆ ಕರೆಯಬೇಕಿತ್ತು. ವಿಳಂಬವಾದಷ್ಟು ರೈತರಿಗೆ ಅನನುಕೂಲವಾಗಲಿದೆ. ಎರಡನೆಯ ಬೆಳೆಗೆ ನೀರು ಒದಗಿಸುವಷ್ಟು ಜಲಾಶಯದಲ್ಲಿ ನೀರಿದೆ. ಅಧಿಕಾರಿಗಳು ದಾರಿ ಕೃಷಿಕರ ತಪ್ಪಿಸಬಾರದು. ಈಗಿನ ನೀರಿನ ಲೆಕ್ಕಾಚಾರದಲ್ಲಿ ಬೇಸಿಗೆ ಬೆಳೆಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕಿದೆ. ಟೇಲೆಂಡ್ ಭಾಗಕ್ಕೂ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ಕೂಡಲೇ ಐಸಿಸಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ರಸಗೊಬ್ಬರ ಕ್ರಿಮಿನಾಶಕ ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಗೊರೇಬಾಳ ಮಾತನಾಡಿ, ಜಲಾಶಯದಲ್ಲಿ ನೀರಿನ ಸಂಗ್ರಹ ಇರುವುದರಿಂದ ಎರಡನೆಯ ಬೆಳೆಗೆ ನೀರು ಸಿಗುವ ಎಲ್ಲಾ ಸಾಧ್ಯತೆ ಇದೆ. ಈ ವಿಚಾರವನ್ನು ಐಸಿಸಿ ಸಭೆ ಮಾಡಿ ಪ್ರಕಟಿಸಿದರೆ ರೈತರಿಗೆ ಅನುಕೂಲವಾಗಲಿದೆಂದು ತಿಳಿಸಿದರು.