ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವರ ಹೆಸರಿನ ಸೇವಾ ಸಮಿತಿ ಆಶ್ರಯದಲ್ಲಿ ಗ್ರಂಥಾಲಯ ಆರಂಭಿಸಿರುವುದು ಸೂಕ್ತವಾಗಿದೆ. ಎಲ್ಲರೂ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್, ಸುಕಾಲಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳಿಯಿಂದ ಆಯೋಜಿಸಿದ್ದ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಭಾನುವಾರ ಮಾತನಾಡಿದರು.
ಜ್ಞಾನಾರ್ಜನೆ ಹೆಚ್ಚಿಸುವಲ್ಲಿ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ಒಳ್ಳೆಯ ಪುಸ್ತಕ ಸಂಗ್ರಹಿಸುವ ಕೆಲಸ ಆಗಬೇಕು. ಜ್ಞಾನ ನೀಡುವ ಪುಸ್ತಕಗಳಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ಮತ ಮಾರಾಟವಾದಲ್ಲಿ ಪ್ರಜಾಪ್ರಭುತ್ವ ನಾಶ
ಮಾಜಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಜ್ಞಾನ ಸಂಪತ್ತಿಗೆ ಇನ್ನೊಂದು ಹೆಸರು ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಅಂಬೇಡ್ಕರ್ ವಿಚಾರಧಾರೆಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದರು.
ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷ ಯಮನಪ್ಪ ಗಿರಿಜಾಲಿ, ಪ್ರಮುಖರಾದ ಕೆ.ಕರಿಯಪ್ಪ, ಅಲ್ಲಮಪ್ರಭು ಪೂಜಾರಿ, ಹನುಮಂತಪ್ಪ ಪನ್ನೂರು, ಹುಸೇನಪ್ಪ ಬಾಲಿ, ದುರ್ಗಾಪ್ರಸಾದ, ಹುಸೇನಪ್ಪ ಪೂಜಾರಿ, ಎಚ್.ಜಗದೀಶ ವಕೀಲ, ಬಸವರಾಜ ಕರ್ನಿ ಇತರರಿದ್ದರು.