ಶೃಂಗೇರಿ: ಭಗವಂತ ಎಲ್ಲ ಕಡೆ ಇದ್ದಾನೆ. ಭಕ್ತರು ಶ್ರದ್ಧಾಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದರೆ ಆತ ವಿಶೇಷ ಚೈತನ್ಯದ ಅಸ್ತಿತ್ವ ತೋರ್ಪಡಿಸುತ್ತಾನೆ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಮಲ್ನಾಡು ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾಕುಂಭಾಭಿಷೇಕ ಹಾಗೂ ಮರು ಪ್ರತಿಷ್ಠೆ ನೆರವೇರಿಸಿ ಮಾತನಾಡಿದರು.
ಭಗವಂತನನ್ನು ಪರಿಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ. ದೇಶದ ಪಾರಂಪರಿಕ ಮೌಲ್ಯಗಳಿಗೆ ಆದ್ಯತೆ ನೀಡಿದ ಋಷಿಮುನಿಗಳು ದೇವರ ಆರಾಧನೆಯನ್ನು ಶ್ರದ್ಧೆಯಿಂದ ಮಾಡಿದರು. ಧ್ಯಾನಸ್ಥರಾಗಿ ಮಾನಸಿಕವಾಗಿ ಭಗವಂತನನ್ನು ಪ್ರಾರ್ಥಿಸಿದಾಗ ಮಾತ್ರ ನಮಗೆ ಆಧ್ಯಾತ್ಮಿಕ ಶ್ರೇಯಸ್ಸು ಲಭಿಸಲು ಸಾಧ್ಯ. ಶಿವನ ನಾಮಸ್ಮರಣೆ ಸರಳವಾಗಿ ಮಾಡಿದರೂ ಆತನು ಬಲುಬೇಗ ಒಲಿಯುತ್ತಾನೆ. ತೋರಿಕೆಯ ಭಕ್ತಿ ಸಲ್ಲದು. ಶ್ರದ್ಧೆ ಎಂಬುದು ನಮ್ಮಲ್ಲಿದ್ದಾಗ ದೇವರು ಸದಾ ನಮ್ಮ ಜತೆಗಿರುತ್ತಾನೆ ಎಂದರು.
ಧ್ಯಾನ ಮಾಡಲು ಮನಸ್ಸು ಮುಖ್ಯ. ಮನಸ್ಸು ಹಾಗೂ ಬುದ್ಧಿಯಿಂದ ಪರಿಜ್ಞಾನ ಲಭ್ಯವಾಗುತ್ತದೆ. ಒಂದು ಕ್ಷಣ ದೇವರ ಮುಂದೆ ಶ್ರದ್ಧಾಭಕ್ತಿಯಿಂದ ನಿಂತರೆ ಆತನು ಭಕ್ತರ ಅಭೀಷ್ಟೆಗಳನ್ನು ಅರಿತುಕೊಳ್ಳುತ್ತಾನೆ ಎಂದರು.