ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ (ಟೇಲೆಂಡ್) ನೀರು ಕಳಿಸುವ ನೆಪದಲ್ಲಿ ತಾಲೂಕು ವ್ಯಾಪ್ತಿಯ ಉಪಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಕಠಿಣ ಪರಿಸ್ಥಿತಿ ಎದುರಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.
ಎಡದಂಡೆ ಮುಖ್ಯ ನಾಲೆಯ 36ನೇ ಉಪಕಾಲುವೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಒಂದು ವಾರ ಉಪಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ಟೇಲೆಂಡ್ ಭಾಗಕ್ಕೆ ನೀರು ಹರಿಸಲಾಗಿತ್ತು. ಇದರಿಂದ ತಾಲೂಕಿನಲ್ಲಿ ಭತ್ತದ ಬೆಳೆ ಒಣಗಿದ್ದವು. ಈಗ ಮತ್ತೆ ಉಪಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಿ ಟೇಲೆಂಡ್ ಭಾಗಕ್ಕೆ ನೀರು ಕಳಿಸಲು ನೀರಾವರಿ ಅಧಿಕಾರಿಗಳು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಳೆದ ವರ್ಷದಿಂದ ಈ ಪದ್ಧತಿ ಅನುಸರಿಲಾಗುತ್ತಿದೆ ಎಂದು ದೂರಿದರು.
ಈ ಹಿಂದಿನ ವರ್ಷಗಳಲ್ಲಿ ಉಪಕಾಲುವೆಗೆ ಹರಿಯುವ ನೀರಿನ ಗೇಜ್ ಕಡಿಮೆ ಮಾಡಿ ಟೇಲೆಂಡ್ ಭಾಗಕ್ಕೆ ನೀರು ಹರಿಸಲಾಗುತ್ತಿತ್ತು. ಆದರೆ, ಈಗ ಏಕಾಏಕಿ ಉಪಕಾಲುವೆಗಳಲ್ಲಿ ನೀರಿನ ಹರಿವು ಸ್ಥಗಿತಗೊಳಿಸಲು ಯಾರು ಅಧಿಕಾರ ನೀಡಿದ್ದಾರೆ ಎಂದು ಅಧಿಕಾರಿಗಳನ್ನು ರೈತರು ದಬಾಯಿಸಿದರು.