ಸಿಂಧನೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಗರಸಭೆಯಿಂದ ಹಲವು ಸೌಲಭ್ಯಗಳಿದ್ದು, ನಿಗದಿಗಿಂತ ಕಡಿಮೆ ಅರ್ಜಿಗಳು ಬಂದಿದ್ದು, ಸೌಲಭ್ಯಗಳ ಕುರಿತು ವಾರ್ಡ್ಗಳ ಸದಸ್ಯರು ಅರಿವು ಮೂಡಿಸುವ ಜತೆಗೆ ವಾರದೊಳಗೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೃತ ನಗರೋತ್ಥಾನ ಯೋಜನೆ ಹಂತ-4ರಡಿ ನಗರಸಭೆ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿ ಜನರಿಗೆ ಅಂಬೇಡ್ಕರ್ ಹಾಗೂ ಇತರ ವಸತಿ ಯೋಜನೆಯಡಿ ಪ್ರತಿ ಫಲಾನುಭವಿಗೆ ನಿವೇಶನ ಖರೀದಿಗಾಗಿ 2.50 ಲಕ್ಷ ರೂ., ಸಣ್ಣ ಉದ್ದಿಮೆದಾರರಿಗೆ ಡೆ-ನಲ್ಮ್ ಯೋಜನೆಯಡಿ 1.50 ಲಕ್ಷ ರೂ. ಸಹಾಯ ಧನ ಸೇರಿ ಹಲವು ಸೌಲಭ್ಯಗಳಿವೆ. ಆದರೆ ಅರ್ಜಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಆಯಾ ವಾರ್ಡ್ ಸದಸ್ಯರು ವಾರದೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಅರ್ಹರಿಗೆ ತಿಳಿಸಬೇಕು. ಇಲ್ಲದಿದ್ದರೆ ಹಣ ವಾಪಸ್ ಹೋಗುತ್ತದೆ ಎಂದರು.
ಸದಸ್ಯರ ಆಕ್ರೋಶ
24/7 ಕುಡಿವ ನೀರು ಹಾಗೂ ಯುಜಿಡಿ ಕಾಮಗಾರಿ ಶೇ.94 ಪೂರ್ಣಗೊಂಡಿದೆ ಎಂದು ಗುತ್ತಿಗೆದಾರ ವಿಶ್ವೇಶ್ವರಯ್ಯ ಹಾಗೂ ಇಂಜಿನಿಯರ್ ರಮೇಶ್ ಅವರು ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಸದಸ್ಯರು, ವಾರ್ಡ್ಗಳಲ್ಲಿ ಇದುವರೆಗೂ ನಳ ಸಂಪರ್ಕ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮುಂದಿನ ದಿನಗಳಲ್ಲಿ ಶಾಸಕರೂ ಸೇರಿ, ಎಲ್ಲರೂ ವಾರ್ಡ್ಗಳಿಗೆ ಹೋಗಿ 24/7 ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿ ಪರಿಶೀಲಿಸಿ, ಜನರಿಂದ ಉತ್ತಮ ಸ್ಪಂದನೆ ಬಂದರೆ ಮಾತ್ರ ಹಸ್ತಾಂತರ ಪ್ರಕ್ರಿಯೆ ನಡೆಸುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನಿಸೋಣ ಎಂದರು.
ಪೌರಾಯುಕ್ತ ಮಂಜುನಾಥ ಗುಂಡೂರು ವಿವಿಧ ಅಭಿವೃದ್ಧಿ ಕಾಮಗಾರಿ, ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ತಿಮ್ಮಯ್ಯ ಭಂಗಿ ಇತರರಿದ್ದರು.