ವಿಜಯಪುರ: ಸ್ವಾಮಿ ವಿವೇಕಾನಂದರ ಏಳಿ ಎದ್ದೇಳಿ ಎಂಬ ವಾಣಿಯನ್ನು ಗಮನದಲ್ಲಿಟ್ಟುಕೊಂಡು ಸತ್ಪ್ರಜೆಯಾಗುವುದರೊಂದಿಗೆ ಉತ್ತಮ ಸಾಧಕರಾಗಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ಚೆಂಗಳಿ ಹೇಳಿದರು.
ಸಿಂದಗಿ ಪಟ್ಟಣದ ಕುಮಾರ ಇನ್ಫೋಟೆಕ್ ಸಂಸ್ಥೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆ, ಕುಮಾರ ಇನ್ಪೋಟೆಕ್ ಕೌಶಲಾಭಿವೃದ್ಧಿ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಿಲ್ಡ್ ಟೆಕ್ನಿಸೆನ್ ಕಂಪ್ಯೂಟರಿಂಗ್ ಹಾಗೂ ಡಾಕ್ಯೂಮೆಂಟೆಷನ್ ಅಸಿಸ್ಟಂಟ್ ಕೋರ್ಸ್ಗಳಿಗೆ ಆಯ್ಕೆಯಾದ ಯುವತಿಯರಿಗಾಗಿ ಹಮ್ಮಿಕೊಂಡಿದ್ದ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಸರ್ಕಾರದಿಂದ ವಿವಿಧ ಯೋಜನೆಗಳಡಿ ನೀಡುತ್ತಿರುವ ತರಬೇತಿ ಪಡೆದು ಆರ್ಥಿಕ ಸಬಲರಾಗುವಂತೆ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರ ಜತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಸುತ್ತೇನೆಂದು ಅವರು ಹೇಳಿದರು.
ಕುಮಾರ ಇನ್ಪೋಟೆಕ್ ಸಂಸ್ಥೆ ಅಧ್ಯಕ್ಷ ಕುಮಾರ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಎ.ವಿಜಯಕುಮಾರಿ, ಜಿಲ್ಲಾ ಸಂಯೋಜಕಿ ಭಾರತಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಬಿ.ಜಿ. ಹೊಸಮನಿ, ಕೆ.ಕೆ.ದೇಸಾಯಿ, ಸೀಮಾ ಸಾಲಿಮಠ, ಆನಂದ ಗೊರಗುಂಡಗಿ ಮತ್ತಿತರರು ಉಪಸ್ಥಿತರಿದ್ದರು. ಸೌಮ್ಯ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಕೃಷ್ಣಮೂರ್ತಿ ವಂದಿಸಿದರು.