ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಟೇಬಲ್ ಟೆನ್ನಿಸ್ ಆಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿರುವ ಭವೀನಾ ಬೇನ್ ಪಟೇಲ್ ಅವರು ಗೆಲುವಿನ ಸಂತಸದಲ್ಲಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 2016 ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಶಾಟ್ಪುಟ್ನಲ್ಲಿ ಭಾರತಕ್ಕೆ ರಜತ ಪದಕ ಗೆದ್ದಿದ್ದ ದೀಪಾ ಮಲಿಕ್ ಅವರು, ಮತ್ತೊಬ್ಬ ಆಟಗಾರ್ತಿ ವೀಲ್ ಚೇರ್ ಮೇಲೆ ಆಡಿ ಪದಕ ಗಳಿಸಿರುವುದು ಶ್ಲಾಘನೀಯ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಭವೀನಾ, ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುವಂತಹ ಟೇಬಲ್ ಟೆನ್ನಿಸ್ ಆಟದಲ್ಲಿ ಪೂರ್ಣ ತಲ್ಲೀನತೆಯಿಂದ ಭಾಗವಹಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ತಾವು ರೂಢಿಸಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ಕೋಚ್ ನಿಕುಲ್ ಪಟೇಲ್ ಅವರು ಟೋಕಿಯೋಗೆ ಬಾರದಿದ್ದರೂ, ವಿಡಿಯೋ ಕಾಲ್ನ ಮೂಲಕ ತಮಗೆ ಪಂದ್ಯಾವಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರೆಂದು ಸ್ಮರಿಸಿದ್ದಾರೆ.
ಇದನ್ನೂ ಓದಿ: ಸಾಕು ಮಕ್ಕಳಿಗೆ ಅಪ್ಪ-ಅಮ್ಮನ ಆಸ್ತಿಯಲ್ಲಿ ಹಕ್ಕು ಇರುತ್ತಾ? ಕಾನೂನು ಹೇಳುವುದೇನು?
ನಿಮ್ಮ ಪದಕವನ್ನು ಯಾರಿಗೆ ತೋರಿಸಿ ಸೆಲೆಬ್ರೇಟ್ ಮಾಡಲಿಚ್ಛಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭವೀನಾ, “ನನಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರೇರಣಾದಾಯಕವಾಗಿದ್ದು, ಅವರನ್ನು ಒಮ್ಮೆ ಖುದ್ದು ಮಾತನಾಡಿಸಲಿಚ್ಛಿಸುತ್ತೇನೆ. ಅವರಿಂದ ಇನ್ನಷ್ಟು ಪ್ರೋತ್ಸಾಹದಾಯಕ ಮಾತುಗಳನ್ನು ಕೇಳಲಿಚ್ಛಿಸುತ್ತೇನೆ” ಎಂದಿದ್ದಾರೆ. (ಏಜೆನ್ಸೀಸ್)
ಅಣ್ಣಮ್ಮದೇವಿ ಭಕ್ತೆಯ ಸರ ಕದ್ದ ಹಳೇ ಕಳ್ಳ, ಜೈಲು ಪಾಲು; 300 ಗ್ರಾಂ ಚಿನ್ನಾಭರಣ ಜಪ್ತಿ