ರಾಮನಗರ: ಅದ್ಹೇಕೋ ಏನೋ ಸಮಸ್ಯೆ ಎಂಬುದು ರೇಷ್ಮೆ ಬೆಳೆಗಾರರ ಬೆನ್ನಿಗೆ ಬಿದ್ದ ಬೇತಾಳದಂತಿದೆ. ಈ ಸಮಸ್ಯೆಯ ಭೂತವನ್ನು ಕಿತ್ತೆಸೆಯಲು ಇರಲಿ, ಕನಿಷ್ಠಪಕ್ಷ ಬೆನ್ನಿಂದ ಕೆಳಗಿಳಿಸುವ ಪ್ರಯತ್ನವನ್ನೂ ಆಡಳಿತ ವರ್ಗ ಮಾಡುತ್ತಿಲ್ಲ. ವಾರಕ್ಕೊಂದು ಸಮಸ್ಯೆ ಉದ್ಭವಿಸುತ್ತಲೇ ಇರುವ ರೇಷ್ಮೆನಗರಿ ರಾಮನಗದಲ್ಲಿ ಇಂದು(ಶನಿವಾರ) ರೇಷ್ಮೆ ಗೂಡು ಹರಾಜು ಪ್ರಕ್ರಿಯೆಯಿಂದಲೇ ರೀಲರ್ಗಳು ಹೊರ ಉಳಿದಿದ್ದಾರೆ!
ಇದನ್ನೂ ಓದಿರಿ ರೈತನಿಂದಲೇ ಟ್ರ್ಯಾಕ್ಟರ್ ಹರಿಸಿ ರೇಷ್ಮೆ ಬೆಳೆ ನೆಲಸಮ
ರಾಮನಗರ ಮತ್ತು ಕನಕಪುರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ಎಂದಿನಂತೆ ರೈತರು ರೇಷ್ಮೆಗೂಡು ತಂದಿದ್ದಾರೆ. ಆದರೆ, ರೇಷ್ಮೆನೂಲಿಗೆ ಬೇಡಿಕೆ ಕುಸಿದಿದೆ. ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಪಟ್ಟು ಹಿಡಿದಿರುವ ರೀಲರ್ಗಳು ಗೂಡು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೊರಗುಳಿದಿದ್ದಾರೆ. ಈಗಾಗಲೇ ಗೂಡಿನ ಬೆಲೆ ಕುಸಿತಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ತಂದಿರುವ ಗೂಡು ಮಾರಾಟ ಆಗದಿದ್ದರೆ ಹೇಗೆ? ಎಂಬ ಆತಂಕದಲ್ಲಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಪ್ರತಿಭಟನೆ ಮಾಡುವ ಸಾಧ್ಯತೆ ಹಿನ್ನೆಲೆ ಮಾರುಕಟ್ಟೆ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ರೀಲರ್ಸ್ ಮತ್ತು ರೈತರು ಕಾಯುತ್ತಿದ್ದರು. ಆದರೆ ಸಚಿವರು ಮಾತ್ರ ಮಾರುಕಟ್ಟೆಯತ್ತ ಬರಲೇ ಇಲ್ಲ. ಈಗ ತಮ್ಮ ನೆರವಿಗೆ ಸರ್ಕಾರ ಬಾರದಿದ್ದಲ್ಲಿ ಗೂಡು ಖರೀದಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎಂದು ರೀಲರ್ಗಳು ಸವಾಲ್ ಹಾಕಿದ್ದಾರೆ. ಇದರ ಬಿಸಿ ರೈತನಿಗೂ ತಟ್ಟುತ್ತಿದೆ.
ಇದನ್ನೂ ಓದಿರಿ ರೇಷ್ಮೆ ಬೆಳೆಗಾರರು ಕಾದರೂ ಬಾರದ ಡಿಸಿಎಂ