ಮೈಸೂರು: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮತ್ತು ತೇಜೋವಧೆ ಮಾಡಿರುವ ಗೋವಿಂದನಾಯಕ ಎಂಬುವವನ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ವತಿಯಿಂದ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಲಾಗಿದೆ.
ಜು.17ರಂದು ಹುಣಸೂರಿನ ಕಲ್ಕುಣಿಕೆಯ ಗುರುಗಳ ಕಟ್ಟೆ ಬೀದಿಯ ನಿವಾಸಿಯಾದ ಗೋವಿಂದನಾಯಕ ಎಂಬಾತ ಫೇಸ್ಬುಕ್ನಲ್ಲಿ ‘2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ’ ಎನ್ನುವ ಮಾಜಿ ಸಿಎಂ ಸುದ್ದಿಯನ್ನು ಬಿತ್ತರಿಸುವ ಟಿವಿ9 ಮೆಸೇಜ್ಗೆ ಕಾಮೆಂಟ್ ಮಾಡಿದ್ದು, ಸಿದ್ದರಾಮಯ್ಯ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜ್ಯದ ಒಬ್ಬ ಹಿರಿಯ ಮುತ್ಸದ್ಧಿಯನ್ನು ಹೀಗೆ ಬೇಜವಾಬ್ದಾರಿಯುತವಾಗಿ ಕೀಳು ಭಾಷೆ ಪ್ರಯೋಗಿಸಿರುವುದು ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಸದರಿ ಹೇಳಿಕೆಯು ಭಾರತೀಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದು ರಾಜಕೀಯ ಪಕ್ಷಗಳ ಕಾರ್ಯಕರ್ತರು ನಡುವೆ ಶಾಂತಿ ಕದಡಿ ಘರ್ಷಣೆಗೆ ಅವಕಾಶ ಮಾಡಿಕೊಡುವ ಅವಕಾಶವಿರುತ್ತದೆ. ಹೀಗಾಗಿ, ಈ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಕೀಲರಾದ ಸುರೇಶ್ಪಾಳ್ಯ, ತಿಮ್ಮಯ್ಯ, ಶಿವಪ್ರಸಾದ್, ಗಂಗಾಧರ್, ಶಿವಕುಮಾರ್, ಲಕ್ಕೇಗೌಡ, ಮಹೇಶ್, ಚರಣರಾಜ್, ಪ್ರಣಿತ್, ಕವಿತಾ ಕಾಳೆ, ಮೈತ್ರಿ, ಭಾಸ್ಕರ್ ಇತರರು ದೂರು ಸಲ್ಲಿಸುವ ಸಂದರ್ಭದಲ್ಲಿದ್ದರು.