ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸ್ವಂತ ನೆಲೆಯಿಲ್ಲ. ಆಯ್ಕೆ ಮಾಡಿ ಕಳುಹಿಸಿದ ಜನರ ವಿಶ್ವಾಸವೂ ಉಳಿಸಿಕೊಂಡಿಲ್ಲ. ಇದರಿಂದಾಗಿ ದಿಕ್ಕೆಟ್ಟು ಕ್ಷೇತ್ರ ಪಲಾಯನ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಜನ ಕೇಳುತ್ತಿದ್ದಾರೆ ಚಾಮುಂಡೇಶ್ವರಿ ಕ್ಷೇತ್ರವನ್ನು ಏಕೆ ತೊರೆದಿದ್ದು? ಅಷ್ಟೆಲ್ಲಾ ಅಭಿವೃದ್ಧಿ ಕೆಲಸ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದೇಕೆ? ಬಾದಾಮಿಯಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯಗಳೇನು? ಎಂದು ಅಶೋಕ್ ಪ್ರಶ್ನಿಸಿದರು.
ವೇದಿಕೆಯಲ್ಲಿ ಅವರದೇ ಪಕ್ಷದ ಮಾಜಿ ಸಚಿವ ಚಿಮ್ಮನಕಟ್ಟಿ ಅವರು ನೇರವಾಗಿ ಸಿದ್ಧರಾಮಯ್ಯ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದಿದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲಿ ಎಂದು ಆರ್.ಅಶೋಕ್ ಸವಾಲು ಹಾಕಿದರು.
ಪದೇ ಪದೇ ಕ್ಷೇತ್ರ ಪಲಾಯನ ಏಕೆ ಮಾಡ್ತಿದ್ದಾರೆ ಸಿದ್ದರಾಮಯ್ಯ. ಒಂದು ಬಾರಿ ಗೆದ್ದರೂ ಜನರ ಪ್ರೀತಿ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಹಿಂದೆ ಪರಮೇಶ್ವರ್, ಮುನಿಯಪ್ಪ ಸೋಲಿಸಿದ್ದೀರಿ. ಅವರು ಸುಮ್ಮನಿರುತ್ತಾರಾ? ಅವರು ಗಾಳ ಹಾಕುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಗೆ ಕೋಲಾರ ಕೂಡಾ ಸೇಫ್ ಅಲ್ಲ. ಬಾದಾಮಿ, ಚಾಮುಂಡೇಶ್ವರಿಗಿಂತ ಪರದಾಡಬೇಕಾಗುತ್ತೆ. ಮಾಜಿ ಶಾಸಕ ಶ್ರೀನಿವಾಸ ಗೌಡರಿಗೆ ಅಮಿಷವೊಡ್ಡಲಾಗಿದೆ. ಕಾಂಗ್ರೆಸ್ ಬಸ್ ಯಾತ್ರೆ ಪ್ಯಾಕೇಜ್ ಯಾತ್ರೆಯಾಗಿದೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಅವರನ್ನು ಬಾದಾಮಿ, ಚಾಮುಂಡೇಶ್ವರಿಯಲ್ಲಿ ಅವರ ಪಕ್ಷದವರೇ ಓಡಿಸಿದರು. ಕೋಲಾರದಲ್ಲೂ ಸೋಲುತ್ತಾರೆ ಎಂದು ಆರ್. ಅಶೋಕ್ ಭವಿಷ್ಯ ನುಡಿದರು.
ವಿಧಾನಸೌಧ ಮುಂದೆ ಬಸವೇಶ್ವರ, ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ಕೊನೆಗೂ ಕೂಡಿ ಬಂತು ಕಾಲ
ರಸ್ತೆಯಲ್ಲಿ ಸಿಕ್ಕ ಮದ್ಯ ಸೇವಿಸಿದ ಮೂವರು ಯುವಕರು: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ ಪತ್ತೆ! ಸಾವಿನ ಸುತ್ತ ಅನುಮಾನದ ಹುತ್ತ…