ದಾವಣಗೆರೆ: ಕಳೆದ ಕೆಲವು ದಿನಗಳಿಂದ ಒಂದು ಉತ್ಸವ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದು ಬೇರೆ ಯಾವುದೂ ಅಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ, ಸಿದ್ದರಾಮೋತ್ಸವ. ಆದರೆ ಅದು ಸಿದ್ದರಾಮೋತ್ಸವ ಅಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ನಿಜಕ್ಕೂ ಅದು ಯಾವ ಉತ್ಸವ ಎಂಬುದನ್ನು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಆ. 3ರಂದು ನಡೆಯುವ ತಮ್ಮ 75ನೇ ಜನ್ಮ ದಿನಾಚರಣೆಯನ್ನು ‘ಸಿದ್ದರಾಮೋತ್ಸವ’ ಎಂದು ನಾವು ಹೇಳಿಲ್ಲ ಎಂದು ಇಂದು ದಾವಣಗೆರೆಯಲ್ಲಿ ಮಾತನಾಡುತ್ತ ಸ್ಪಷ್ಟನೆ ನೀಡಿದ ಅವರು, ಮಾಧ್ಯಮದವರು ಮತ್ತು ಆರ್ಎಸ್ಎಸ್ನವರು ‘ಸಿದ್ದರಾಮೋತ್ಸವ’ ಎಂದು ವ್ಯಂಗ್ಯವಾಗಿ ಆ ರೀತಿ ಕರೆದಿದ್ದಾರೆ. ವಾಸ್ತವದಲ್ಲಿ ಇದು ‘ಅಮೃತೋತ್ಸವ’ ಎಂದು ಹೇಳಿದರು.
ಯಾವುದೇ ವ್ಯಕ್ತಿಯ ಜೀವನದಲ್ಲಿ 75 ವರ್ಷದ ಅವಧಿ ಒಂದು ಮೈಲಿಗಲ್ಲು. ಜತೆಗೆ ನಾನು ಸಾರ್ವಜನಿಕ ಜೀವನದಲ್ಲಿ 40ಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಸೇರಿ ಈ ಆಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಾನು ಎಂದೂ ಜನ್ಮದಿನ ಆಚರಿಸಿಕೊಂಡಿಲ್ಲ, ಮುಂದೆಯೂ ಆಚರಣೆ ಮಾಡಿಕೊಳ್ಳುವುದಿಲ್ಲ. 75 ವರ್ಷ ಪೂರೈಸಿರುವುದನ್ನು ಸ್ಮರಣೀಯ ಆಗಿಸುವ ದೃಷ್ಟಿಯಿಂದ ಆಚರಿಸುತ್ತಿದ್ದಾರೆ. ಅದಕ್ಕೊಂದು ಸಮಿತಿಯನ್ನೂ ರಚಿಸಲಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಹಲವು ನಾಯಕರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬೇರೆ ಪಕ್ಷದ ಯಾರಿಗೂ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ ಎಂದರು.
ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ವ್ಯಂಗ್ಯವಾಗಿ ಏನೇನೋ ಮಾತನಾಡುತ್ತಾರೆ. ಅವರಿಗೆ ಭಯ ಶುರುವಾಗಿದೆ. ಕೆ.ಎಸ್. ಈಶ್ವರಪ್ಪ ಭ್ರಮೆಯಲ್ಲಿದ್ದಾರೆ. ಮಂತ್ರಿ ಸ್ಥಾನ ಕಳೆದುಕೊಂಡಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..