ಬೆಂಗಳೂರು: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಫೇಸ್ಬುಕ್ ಸ್ಟೋರಿ, ವಾಟ್ಸ್ಆ್ಯಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಂ ಸ್ಟೋರಿ ಎಲ್ಲಿ ನೋಡಿದರು ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿದೆ. ಅಲ್ಲದರೆ, ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದೆ.
ಹಾಗಾದರೆ ಆ ವಿಡಿಯೋ ಯಾವುದು ಅಂತಿರಾ… ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ವೇದಿಕೆ ಮೇಲಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರೂಪಕಿಯನ್ನು ವಾರೆಗಣ್ಣಿಂದ ನೋಡಿದರು. ಹಾಗೇ ನಿರೂಪಕಿಯನ್ನು ನೋಡಿಕೊಂಡೇ ವೇದಿಕೆಯಿಂದ ಹೊರ ನಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮೆನ್ ವಿಲ್ ಬಿ ಮೆನ್ ಎಂದು ಟ್ರೋಲ್ ಆಗಿದೆ.
ಇದೀಗ ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಅಥವಾ ಕೈ ಕಾರ್ಯಕರ್ತೆ ವಿಡಿಯೋ ಕುರಿತು ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಕೈ ಕಾರ್ಯಕರ್ತೆಯ ಹೆಸರು ಲಾವಣ್ಯ ಬಲ್ಲಾಳ್.
ಸಿದ್ದರಾಮಯ್ಯ ಅವರು ವೇದಿಕೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ತುಂಬಾ ಜನ ಸುತ್ತುವರಿದಿದ್ದರೂ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ನನ್ನನ್ನು ನೋಡಿದರು. ನೋಡಿದ ಬಳಿಕ ಇವಳೇನಾ ಅಂತಾ ಅಲ್ಲಿಂದ ಹೊರಟರು ಎಂದು ಲಾವಣ್ಯ ಬಲ್ಲಾಳ್ ಅವರು ದಿಗ್ವಿಜಯ ನ್ಯೂಸ್ಗೆ ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಸರ್ ಅವರಿಗೆ ನಾನು ತುಂಬಾ ಪರಿಚಯ. ಕಾಂಗ್ರೆಸ್ನಲ್ಲಿ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅವರು ನನ್ನನ್ನು ನೋಡಿದ್ದಾರೆ. ನೀವು ಆ ವಿಡಿಯೋ ನೋಡಿರಬಹುದು. ಇವಳೇನಾ ಎಂದು ಹೇಳಿಕೊಂಡು ಹೋಗುತ್ತಾರೆ. ಕುತೂಹಲಕ್ಕೆ ಯಾರು ಅಂತಾ ನೋಡಿದರಷ್ಟೇ, ಅದನ್ನೇ ಕೆಲವರು ಟ್ರೋಲ್ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಸಾಹೇಬರು ನಮಗೆಲ್ಲ ಸ್ಫೂರ್ತಿ. ಕಾರ್ಯಕ್ರಮ ಹಿಂದಿನ ದಿನ ಸಂಜೆಯು ಅವರ ಮನೆಗೆ ಕೆಲವು ಮಾರ್ಗದರ್ಶನ ಪಡೆಯಲು ಹೋಗಿದ್ದೆ. ಸಿದ್ದರಾಮಯ್ಯ ಸಾಹೇಬರಿಗೆ ನಾನು ಚೆನ್ನಾಗಿ ಪರಿಚಯವಿದ್ದೇನೆ. ಪಕ್ಷದ ವಕ್ತಾರೆ ಎಂಬುದು ಸಹ ಅವರಿಗೆ ಗೊತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಕೆಲಸ ಮಾಡುತ್ತಿದ್ದೇನೆ ಎಂಬ ವಿಚಾರ ಗೊತ್ತಿದೆ ಎಂದರು.
ವಿಡಿಯೋ ನೋಡಿದ ಮೇಲೆ ಇಂಟರ್ನೆಟ್ನಲ್ಲಿ ಜನ ಎಷ್ಟು ಫಾಸ್ಟ್ ಆಗಿದ್ದಾರೆ ಅನಿಸಿತು. ನಾನಿನ್ನೂ ನಿರೂಪಣೆ ಮುಗಿಸಿರಲಿಲ್ಲ. ಅಲ್ಲದೆ, ಪ್ರಿಯಾಂಕಾ ಗಾಂಧಿಯವರ ಭಾಷಣ ಸಹ ಆರಂಭವಾಗಿರಲಿಲ್ಲ. ಅಷ್ಟರಲ್ಲೇ ವಿಡಿಯೋ ವೈರಲ್ ಆಗಿತ್ತು. ನನ್ನ ಫೋನ್ ಯಾಕಿಷ್ಟು ರಿಂಗ್ ಆಗುತ್ತಿದೆ? ಮತ್ತು ಯಾಕಿಷ್ಟು ಮೆಸೇಜ್ಗಳು ಬರುತ್ತಿವೆ ಅಂತಾ ನೋಡಿದರೆ ದೆಹಲಿಯಿಂದ ಒಬ್ಬರು ಮೆಸೇಜ್ ಮಾಡಿದ್ದರು. ವೇದಿಕೆ ಮೇಲಿರುವುದು ನೀನೆ ಅಲ್ವಾ ಅಂತಾ ಕೇಳಿದರು. ನಿನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಬಂದಷ್ಟು ಮೆಸೇಜ್ಗಳು ನನ್ನ ಜೀವನದಲ್ಲೇ ಬಂದಿಲ್ಲ. ಎಲ್ಲಾ ಕಡೆ ವೈರಲ್ ಆಗಿದೆ. ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರು ಏನು ಮಾಡಿದರು ಅದೇ ಟ್ರೆಂಡ್ ಆಗುತ್ತದೆ. ಇದರಲ್ಲಿ ಅಚ್ಚರಿ ಏನಿಲ್ಲ ಎಂದು ಲಾವಣ್ಯ ಬಲ್ಲಾಳ್ ಹೇಳಿದರು.
ಬೇಸರ ಮಾಡಿಕೊಳ್ಳುವಂಥದ್ದು ವಿಡಿಯೋದಲ್ಲಿ ಏನು ಇಲ್ಲ. ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವೆ ಇರುವ ಬಾಂಧವ್ಯ ನನಗೆ ಚೆನ್ನಾಗಿ ತಿಳಿದಿದೆ. ಜನ ಏನಾದರೂ ಮಾಡಿಕೊಳ್ಳಲಿ, ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಕಡಿಮೆ ಆಗುವುದಿಲ್ಲ. ಅವರಿಗು ನನ್ನ ಮೇಲೆ ಇರುವ ಪ್ರೀತಿ, ಅಭಿಮಾನ ಕಡಿಮೆ ಆಗುವುದಿಲ್ಲ. ರಾಜಕೀಯ ಅಂದಮೇಲೆ ಇಂಥಾ ಟ್ರೋಲ್ಗಳು ಆಗುವುದು ಸಹಜ. ಇದೆಲ್ಲ ಹೊಸದೇನಲ್ಲ. ಕೆಲವರು ಇದನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಇನ್ನು ಕೆಲವರು ಇದನ್ನು ತಮಾಷೆ ದೃಷ್ಟಿಯಿಂದ ನೋಡುತ್ತಾರೆ. ಕೆಟ್ಟ ದೃಷ್ಟಿಯಿಂದ ನೋಡುವವರಿಗೆ ನಾನು ಹೇಳುವುದಿಷ್ಟೇ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಬಣ್ಣ. ತಂದೆ-ಮಗಳ ಭಾವನೆ ನಿಮಗೆ ಅರ್ಥವಾಗುವುದಿಲ್ಲ. ಹಿಂದಿನಿಂದಲೂ ನನ್ನನ್ನು ಅದೇ ಭಾವನೆಯಲ್ಲಿ ಸಿದ್ದರಾಮಯ್ಯ ಅವರು ನೆಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ಈ ವಿಡಿಯೋ ಬಗ್ಗೆ ನಾನೇನು ಚಿಂತಿಸುವುದಿಲ್ಲ ಎಂದು ಲಾವಣ್ಯ ಬಲ್ಲಾಳ್ ಹೇಳಿದರು. (ದಿಗ್ವಿಜಯ ನ್ಯೂಸ್)
ಮಗನ ಸಾವು ನೋಡಲಾರೆ ಅಂತಾ ಜೀವ ತೊರೆದ ತಾಯಿ: ಎಂಥವರ ಕಣ್ಣಲ್ಲೂ ನೀರು ತರಿಸುವ ದುರ್ಘಟನೆ ಇದು
ಶಾಲಾ ಮಕ್ಕಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಹೊಸ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ
ಕಣ್ಣಿಗೊಂದು ಸವಾಲ್: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರೋ ಬೆಕ್ಕು ಗುರುತಿಸಲು ಸಾಧ್ಯ!