| ವಿಶೇಷ ವರದಿ ತುಮಕೂರು
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಜತೆ ಮುನಿಸಿಕೊಂಡಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧವಾಗುತ್ತಿದೆ. ನ.1ರಂದು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಬ್ಬಿ ಪಟ್ಟಣಕ್ಕೆ ಆಗಮಿಸುತ್ತಿದ್ದು, ಶಾಸಕರ ಪಕ್ಷ ಸೇರ್ಪಡೆಗೆ ಆಹ್ವಾನಿಸುವ ಸಾಧ್ಯತೆಯಿದೆ.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಜತೆ ಸಾಕಷ್ಟು ಸಲ ವೇದಿಕೆ ಹಂಚಿಕೊಂಡಿರುವ ಎಸ್.ಆರ್.ಶ್ರೀನಿವಾಸ್ ಪಕ್ಷ ಸೇರ್ಪಡೆಯಿಂದ ಕಳಾಹೀನವಾಗಿರುವ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಆನೆಬಲ ಬರಲಿದೆ. ಆದರೆ, ಶಾಸಕ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಸೇರುವುದರಿಂದ ಆಗುವ ಲಾಭ, ನಷ್ಟಗಳ ಬಗ್ಗೆ ರಾಜಕೀಯ ಲೆಕ್ಕಾಚಾರ ನಡೆದಿದೆ.
ಒಕ್ಕಲಿಗರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಮತಗಳನ್ನು ಉಳಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಬೆಂಬಲ ನೀಡಬೇಕು ಎಂದು ಶ್ರೀನಿವಾಸ್ ಬೆಂಬಲಿಗರು ಪ್ರಚಾರ ಆರಂಭಿಸಿದ್ದು ಡಿಕೆಶಿ ಜತೆ ಶ್ರೀನಿವಾಸ್ಗಿರುವ ನೆಂಟಸ್ಥಿಕೆ ಕೂಡ ಇದಕ್ಕೆ ಪುಷ್ಟಿ ನೀಡಿದೆ.
ಹಾಲಿ ಶಾಸಕರು ಕಣಕ್ಕಿಳಿದರಷ್ಟೇ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯ ಎಂಬುದನ್ನರಿತ ಕಾಂಗ್ರೆಸ್ ಹಿರಿಯ ಮುಖಂಡರು ಸ್ಥಳೀಯ ವಿರೋಧ ಲೆಕ್ಕಿಸದೇ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ತಾಪಂ, ಜಿಪಂ ಚುನಾವಣೆ ಎದುರಾದರೂ ಕಾಂಗ್ರೆಸ್ ಶ್ರೀನಿವಾಸ್ ನೇತೃತ್ವದಲ್ಲಿಯೇ ಎದುರಿಸಲು ಸಿದ್ಧವಾಗಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರಿಗೆ ಅಭಿನಂದನೆ: ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲು ಶ್ರೀನಿವಾಸ್ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಕುಮಾರಸ್ವಾಮಿ ಸಮಾವೇಶ ನಡೆಸಿದ್ದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಯೇ ಕಾರ್ಯಕ್ರಮ ನಡೆಸಲಾಗುತ್ತಿದ್ದು, ವಾಸು ಶಕ್ತಿ ಪ್ರದರ್ಶನ ನಡೆಯಲಿದೆ ಎನ್ನಲಾಗಿದೆ.
ಗುಬ್ಬಿ ಜೆಡಿಎಸ್ ಸಮಾವೇಶಕ್ಕೆ ಹರಿದುಬಂದ ಜನಸಾಗರ: ಶ್ರೀನಿವಾಸ್ಗೆ ಪರ್ಯಾಯ ನಾಯಕನನ್ನ ಸೃಷ್ಟಿಸಿದ ದಳಪತಿ
ಕೆರೆಗೆ ಹಾರಿ ಪ್ರಾಣಬಿಟ್ಟ ಅಕ್ಕ-ತಂಗಿ: ಬಾಳಿ ಬದುಕಬೇಕಿದ್ದವರು ಸಾವಿನ ಮನೆಯ ಕದ ತಟ್ಟಿದ್ದೇಕೆ?