ಸಿದ್ದಾಪುರ (ಕೊಪ್ಪಳ): ಹಂದಿಗಳ ಕಳವು ಮಾಡುತ್ತಿದ್ದವರ ಗುಂಪಿನ ಮೇಲೆ ಬೆಂಗಳೂರಿನ ಚಿಕ್ಕಜಾಲ ಠಾಣೆ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಸಮೀಪದ ಮುಸ್ಟೂರು ಬಳಿ ಗುಂಡಿನ ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತರು ರಾಜ್ಯದ ಹಲವೆಡೆ ಹಂದಿಗಳ ಕಳವು ಮಾಡುತ್ತಿದ್ದರು. ಬೆಂಗಳೂರಿನ ಎಂಟು ಪೊಲೀಸರ ತಂಡ ಇವರನ್ನು ಬೆನ್ನತ್ತಿ ಮುಸ್ಟೂರು ಗ್ರಾಮದವರೆಗೂ ಬಂದಿದೆ. ಆಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಾಣ ರಕ್ಷಣೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರು ಕಳ್ಳರಿಗೆ ಗುಂಡು ತಗುಲಿದೆ. ಕೊನೆಗೆ ಐವರೂ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಗಿದೆ. ಈ ವೇಳೆ ಪೊಲೀಸ್ ಅಧಿಕಾರಿ ಪ್ರವೀಣ್ ಮತ್ತು ಬಸವರಾಜಗೆ ಗಾಯಗಳಾಗಿವೆ. ಎಲ್ಲರನ್ನೂ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಂದಿಗಳ ಕಳ್ಳತನ ಮಾಡುತ್ತಿದ್ದವರನ್ನು ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಪ್ರಾಣ ರಕ್ಷಣೆಗೆ ಅಧಿಕಾರಿಗಳು ಫೈರಿಂಗ್ ಮಾಡಿದ್ದಾರೆ. ಶಂಕರ್, ಅಶೋಕ ಹೆಸರಿನ ಆರೋಪಿಗಳಿಗೆ ಗುಂಡು ತಗುಲಿದೆ. ಇವರೊಂದಿಗೆ ಅಂಬಣ್ಣ, ಪರಶುರಾಮ, ಅಡಿವೆಪ್ಪನನ್ನು ಬಂಧಿಸಲಾಗಿದೆ. ಇವರ ಪೈಕಿ ರಾಯಚೂರು ಜಿಲ್ಲೆಯ ಸಿಂಧನೂರಿನ ಮೂವರು, ಉಳಿದ ಇಬ್ಬರು ಗದಗ ಹಾಗೂ ಬೆಳಗಾವಿ ಮೂಲದವರು. ಪೊಲೀಸರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
| ಅರುಣಾಂಗ್ಷು ಗಿರಿ, ಕೊಪ್ಪಳ ಎಸ್ಪಿ