ಸೊರಬ: ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿತು.
ಪಟ್ಟಣದ ಸೀತಾ ರಾಮಚಂದ್ರ ದೇವಾಲಯದಲ್ಲಿ ಬೆಳಗ್ಗಿನಿಂದಲೆ ದೇವರಿಗೆ ಅಭಿಷೇಕ, ಹೋಮ, ಭಜನೆ, ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾದರು. ದೇವಾಲಯದ ಆವರಣದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ವ್ಯವಸ್ಥೆ ಮಾಡಲಾಗಿತ್ತು. ನೆರದ ಭಕ್ತರಲ್ಲ ಜೈ ಶ್ರೀರಾಮ್… ಜೈಜೈ ಶ್ರೀರಾಮ್… ಎಂದು ಘೋಷಣೆ ಕೂಗುತ್ತ ಭಕ್ತಿ ಸಮರ್ಪಿಸಿದರು. ದೇವಸ್ಥಾನ ಸಮಿತಿ ಹಾಗೂ ಮಹಿಳ ಸಂಘದಿಂದ ಕೊಸಂಬರಿ, ಪಾನಕ ವಿತರಿಸಲಾಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ತಾಲೂಕಿನ ಕುಪ್ಪೆ ಗ್ರಾಮದ ಸೀತಾ ರಾಮಚಂದ್ರ ಲಕ್ಷ್ಮಣ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಣ್ಣು ಕಾಯಿ ಅರ್ಪಿಸಿದರು. ಕೊಡಣಿ, ಕುಪ್ಪಗಡ್ಡೆ, ಹೆಚ್ಚೆ ಮೊದಲಾದ ಆಂಜನೇಯ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯಿತು.
ಪ್ರತಿ ಗ್ರಾಮಗಳಲ್ಲೂ ದೇವಾಲಯಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಪ್ರತಿ ಊರು, ಗ್ರಾಮದ ಪ್ರಮುಖರಸೆ ಹಾಗೂ ವೃತ್ತಗಳಲ್ಲಿ ಶ್ರೀರಾಮನ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸಿದವು. ತಾಲೂಕಿನ ಹೆಗ್ಗೋಡಿನಲ್ಲಿ ಅನ್ನ ಸಂತರ್ಪಣೆ, ಹಾಲಗಳಲೆಯಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಕ್ಕಳು ಸೀತೆ, ರಾಮ, ಲಕ್ಷ್ಮಣರ ವೇಷಭೂಷಣದಲ್ಲಿ ಕಂಗೊಳಿಸಿದರು. ಪಟ್ಟಣದ ಶ್ರೀ ರಂಗನಾಥ ದೇವಾಲಯ, ರಾಧ ರುಖುಮ್ಮಾಯಿ ದೇವಾಲಯ, ಹಿರೇಶಕುನದ ಮಾರಿಕಾಂಬ ದೇವಾಲಯ, ಶ್ರೀ ಸತ್ಯನಾರಾಯಣ ಸ್ವಾಮಿ ಸೇರಿದಂತೆ ತಾಲೂಕಿನಾದ್ಯಾಂತ ಶ್ರೀರಾಮ ನಾಮಸ್ಮರಣೆ ಮಾಡಲಾಯಿತು.