ಆಲ್ದೂರು: ಪ್ರಕೃತಿ ಮನುಷ್ಯನನ್ನು ಹಾಳು ಮಾಡಿಲ್ಲ. ಮನುಷ್ಯನೇ ಪ್ರಕೃತಿಯನ್ನು ಹಾಳು ಮಾಡಿದ್ದು, ಅದರ ಪರಿಣಾಮವನ್ನು ಇಂದು ಎದುರಿಸುತ್ತಿದ್ದಾನೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಆಲ್ದೂರು ಸಮೀಪದ ಕೆಳಗೂರು ಗ್ರಾಮದಲ್ಲಿ ಭಾನುವಾರ ಜೀಣೋದ್ಧಾರಗೊಂಡ ದೇವೀರಮ್ಮನ ಸುಗ್ಗಿ ಮಂದಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯನ್ನು ಹಾಳುಮಾಡಿದ್ದರಿಂದ ಇಂದು ಮನುಷ್ಯ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಹುಟ್ಟು-ಸಾವು ಸಹಜ ಪ್ರಕ್ರಿಯೆಯಾದರೂ ಮಾರಕ ಕಾಯಿಲೆಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತಿರುವುದು ವಿಷಾದನೀಯ ಎಂದರು.
ಮಾನವ ಪ್ರಕೃತಿಯನ್ನು ಹಾಳುಮಾಡುವ ಜತೆಗೆ ಜೀವಂತ ಪ್ರಾಣಿ, ಪಕ್ಷಿಗಳನ್ನು ತಿಂದು ಮಾರಕ ಕಾಯಿಲೆಗಳಿಗೆ ತುತ್ತಾಗಿದ್ದಾನೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳದಿದ್ದರೆ ತನ್ನ ವಿನಾಶಕ್ಕೆ ತಾನೇ ಮುನ್ನುಡಿ ಬರೆದುಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.
ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಜೀವನದ ಕೊನೆಯ ಹಂತದವರೆಗೂ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಮನುಷ್ಯ ಕಾಯಿಲೆ ಬಿದ್ದರೆ, ಮೂಲೆ ಹಿಡಿದರೆ ನಿರ್ಲಕ್ಷ್ಯ ಮಾಡುವವರು ಜಾಸ್ತಿ. ಆದರೆ ಮನೆಯಲ್ಲಿರುವ ಒಂದು ಟಿವಿ ಹಾಳಾದರೆ ತಕ್ಷಣ ಅದನ್ನು ರಿಪೇರಿ ಮಾಡಿಸುತ್ತೇವೆ. ಒಂದು ನಿರ್ಜೀವ ವಸ್ತುವಿನ ಮೇಲಿರುವ ಕಾಳಜಿ ಮನುಷ್ಯನ ಮೇಲೆ ಇಲ್ಲದಾಗಿದೆ. ಇದು ಇಂದಿನ ದುಸ್ಥಿತಿಗೆ ಹಿಡಿದ ಕೈಗನ್ನಡಿ. ನಮ್ಮ ಬದುಕು ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಸದಾ ಇಷ್ಟಪಡುವ ದೂರದರ್ಶನದಂತಾಗಬೇಕು ಎಂದರು.
ದೇಗುಲ ಜೀಣೋದ್ಧಾರ ಸಮಿತಿ ಅಧ್ಯಕ್ಷ ದೇವನಂದನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರೂ ದೇವಸ್ಥಾನದ ಜೀಣೋದ್ಧಾರಕ್ಕೆ ಸಹಕಾರ ನೀಡಿದ್ದಾರೆ. ಕೆಲವರು ದೇವಸ್ಥಾನ ನಿರ್ವಣಕ್ಕೆ ತಮ್ಮ ಶ್ರಮವನ್ನೇ ಕಾಣಿಕೆಯಾಗಿ ನೀಡಿದ್ದಾರೆ. ಎಲ್ಲ ಸಮುದಾಯದ ಸಹಕಾರದಿಂದ ಗ್ರಾಮದಲ್ಲಿ ಸುಂದರ ದೇವಾಲಯ ನಿರ್ವಣವಾಗಿದೆ ಎಂದು ತಿಳಿಸಿದರು.
ಮುಖ್ಯ ರಸ್ತೆಯಿಂದ ದೇಗುಲದವರೆಗೆ ಸ್ವಾಮೀಜಿಗಳಿಗೆ 101 ಪೂರ್ಣಕುಂಭ ಸ್ವಾಗತ ಕೋರಲಾಯಿತು. ಚುಂಚನಕಟ್ಟೆಯ ಶ್ರೀ ಶಿವಾನಂದ ಸ್ವಾಮೀಜಿ, ದೇವಾಲಯದ ಧರ್ಮದರ್ಶಿ ನಾಡಪಟೇಲ್ ಕೆ. ವೀರರಾಜ್, ಶಾಸಕ ಎಂ.ಪಿ.ಕುಮಾರಸ್ವಾಮಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ದೇವನಂದನ್, ಪ್ರಧಾನ ಕಾರ್ಯದರ್ಶಿ ಸತೀಶ್ ಇತರರಿದ್ದರು.