ಬೆಂಗಳೂರು: ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ಹೊಸ ವರ್ಷದ ಪ್ರಯುಕ್ತ ಅಭಿಮಾನಿಗಳಿಗೆ ಗಿಫ್ಟ್ ಒಂದನ್ನು ನೀಡಿದ್ದಾರೆ. 2024ಕ್ಕೆ ಅವರ ಸಿನಿಮಾವೊಂದು ಘೋಷಣೆಯಾಗಿದೆ. ಈ ಸ್ಟಾರ್ ನಟ ಮತ್ತು ಡೈರೆಕ್ಟರ್ ಕಾಂಬಿನೇಷನ್ ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಮೂಡಿಸಿದೆ.
ಈಗಾಗಲೇ ಜೈಲರ್ ಹಾಗೂ ಘೋಸ್ಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಶಿವರಾಜ್ಕುಮಾರ್ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನೂತನ ಪ್ರಾಜೆಕ್ಟ್ ಒಂದನ್ನು ಘೋಷಿಸಿದ್ದಾರೆ. ವಿಶೇಷ ಏನೆಂದರೆ ಈ ನೂತನ ಚಿತ್ರವನ್ನು ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಅವರು ನಿರ್ದೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಫೋಟೋದಲ್ಲಿರುವ ಫುಟ್ಬಾಲ್ ಪತ್ತೆ ಹಚ್ಚಿದ್ರೆ ನೀವೇ ಜೀನಿಯಸ್!
ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದಿನಕರ್ ತೂಗುದೀಪ ಕಾಂಬಿನೇಷನ್ನ ಚಿತ್ರವನ್ನು ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಹಾಗೂ ಬಿ. ಎಸ್. ಸುಧೀಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಸೇರಿದಂತೆ ಇತರ ವಿವರಗಳು ಇನ್ನೂ ಅಂತಿಮವಾಗಿಲ್ಲ. ಈ ಚಿತ್ರ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆಯನ್ನು ಬರೆದಿದ್ದಾರೆ. ಚಿತ್ರೀಕರಣದ ತಯಾರಿ ನಡೆಯುತ್ತಿದೆ. ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ದಿನಕರ್ ತೂಗುದೀಪ ಅವರು ಈ ಹಿಂದೆ ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಇದೇ ಮೊದಲ ಬಾರಿಗೆ ಅವರು ಶಿವರಾಜ್ಕುಮಾರ್ ಜೊತೆ ಕೈ ಜೋಡಿಸುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಗರಿಗೆದರಿಸಿದೆ.